ಬಂಟ್ವಾಳ, ಮಾ. 15 (DaijiworldNews/TA): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಬಂಟ್ವಾಳ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಇವರ ಆಶ್ರಯದಲ್ಲಿ "ಮದುಮಗಳ ಶೃಂಗಾರ" ಕಾರ್ಯಕ್ರಮದ ಸಮಾರೋಪ ಸಮಾರಂಭ ಬಂಟ್ವಾಳದ ಉನ್ನತಿ ಸೌಧದ ಸಭಾಂಗಣದಲ್ಲಿ ನಡೆಯಿತು.

ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ವರ್ತಕರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿ, ಮಹಿಳೆಯರ ಸೌಂದರ್ಯ ಹೆಚ್ಚಿಸುವ ಅತ್ಯಂತ ಅವಶ್ಯಕತೆ ಮತ್ತು ಪ್ರಸ್ತುತ ದಿನಗಳಲ್ಲಿ ಬಹಳ ಬೇಡಿಕೆಯಾಗಿರುವ ವೃತ್ತಿಯಾಗಿರುವ ಬ್ಯೂಟಿಷಿಯನ್ ಕೋರ್ಸು ಮಹಿಳೆಯರ ಜೀವನ ರೂಪಿಸುವ ವೃತ್ತಿಯಾಗಿದೆ ಎಂದರು.
ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳು ಜನಪರವಾಗಿದೆ. ಸ್ವಉದ್ಯಮದ ಮೂಲಕ ಪ್ರತೀ ಮನೆಯನ್ನು ಆರ್ಥಿಕವಾಗಿ ಸದೃಡವಾಗಿ ಮಾಡುವುದೇ ಮುಖ್ಯ ಉದ್ದೇಶವಾಗಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್, ಉಡುಪಿ ಪ್ರಾದೇಶಿಕ ಆಡಳಿತ ಪ್ರಬಂಧಕ ಅಮರ್ ಪ್ರಸಾದ್ ಶೆಟ್ಟಿ ತರಬೇತಿದಾರರಾಗಿದ್ದ ಶೋಭಾ ಉಪಸ್ಥಿತರಿದ್ದರು.