ಮಂಗಳೂರು, ಮಾ. 14 (DaijiworldNews/AA): ಕಳುವಾಗಿದ್ದ ಮೊಬೈಲ್ ಫೋನ್ ಒಂದನ್ನು ಯಶಸ್ವಿಯಾಗಿ ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದು, ಅದರ ಅಸಲಿ ಮಾಲೀಕನಿಗೆ ಹಸ್ತಾಂತರಿಸಿದ್ದಾರೆ.

ಕೇಂದ್ರ ಉಪಕರಣ ಗುರುತಿನ ನೋಂದಣಿ (ಸಿಇಐಆರ್) ಪೋರ್ಟಲ್ನಲ್ಲಿ ದಾಖಲಾದ ದೂರು ಮತ್ತು ಸೈಬರ್ ಸೆಲ್ ಅಧಿಕಾರಿ ಅನಿಲ್ ಸೇನ್ ನೀಡಿದ ಮಾಹಿತಿಯ ಆಧಾರದ ಮೇಲೆ ರೈಲ್ವೆ ಪೊಲೀಸರು ಈ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಅಜಿತ್ ಎಂಬುವವರಿಗೆ ಸೇರಿದ ಮೊಬೈಲ್ ಫೋನ್ 2025ರ ಮೇ ತಿಂಗಳಲ್ಲಿ ಕಳುವಾಗಿತ್ತು. ಅವರು ತಮ್ಮ ಕುಟುಂಬದೊಂದಿಗೆ ಮುಂಬೈನಿಂದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದಾಗ, ಮೊಬೈಲ್ ಫೋನ್ ಜೊತೆಗೆ 25,000 ರೂ. ನಗದು ಮತ್ತು ಇತರ ಸಾಮಗ್ರಿಗಳು ಕಳ್ಳತನವಾಗಿದ್ದವು.
ಈ ಬಗ್ಗೆ ರೈಲ್ವೆ ರಕ್ಷಣಾ ಪಡೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಕಾರ್ಯಪ್ರವೃತ್ತರಾದ ಸೈಬರ್ ಸೆಲ್ ಪೊಲೀಸರು ಕಾರ್ಯಾಚರಣೆ ನಡೆಸಿ, ಮೊಬೈಲ್ ಫೋನ್ ಅರ್ಕುಳದಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಅರ್ಕುಳದಲ್ಲಿ ಮೊಬೈಲ್ ಶಾಪ್ ನಡೆಸುತ್ತಿರುವ ಅನ್ಸಾರ್ ಎಂಬುವವರ ಬಳಿ ಈ ಫೋನ್ ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ, ಉಡುಪಿ ಮೂಲದ ಪ್ರಹ್ಲಾದ್ ಎಂಬ ವ್ಯಕ್ತಿ ಈ ಫೋನನ್ನು ಅನ್ಸಾರ್ಗೆ 5,000 ರೂ. ಗೆ ಮಾರಾಟ ಮಾಡಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪತ್ತೆ ಹಚ್ಚಲಾದ ಮೊಬೈಲ್ ಫೋನ್ ಅನ್ನು ರೈಲ್ವೆ ಪೊಲೀಸರು ಇದೀಗ ದೂರುದಾರರ ಸಂಬಂಧಿ, ಮುಂಬೈ ನಿವಾಸಿ ವಿಕಾಸ್ ತ್ರಿಲೋಕ್ ಕುಮಾರ್ ಅವರ ಮೂಲಕ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.