ಉಡುಪಿ, ಮಾ. 12 (DaijiworldNews/TA): ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಪ್ಪೂರು ಗ್ರಾಮದ ಲಕ್ಷ್ಮಿನಗರ ನಿವಾಸಿ ಕಿಶೋರ್(24) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮಲ್ಪೆ, ಬ್ರಹ್ಮಾವರ, ಕುಂದಾಪುರ, ಉಡುಪಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣ ದಾಖಲಾಗಿವೆ. ಈತನನ್ನು ಪೊಲೀಸ್ ಸಿಬ್ಬಂದಿ ಸುರೇಶ್ ಕುಮಾರ್ ಮತ್ತು ಆದರ್ಶ ಮತ್ತು ಎಸ್ಸೈ ಹುಸೇನ್ ಸಾಬ್ ಮಾ.11ರಂದು ಬ್ರಹ್ಮಾವರದ ಕೊಳಲಗಿರಿಯ ಲಕ್ಷ್ಮಿ ನಗರ ಎಂಬಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ಮಾ.26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.