ಕಾರ್ಕಳ, ಮಾ. 11 (DaijiworldNews/TA) : ತಾಲೂಕಿನ ಸಾಣೂರು ಗ್ರಾಮ ವ್ಯಾಪ್ತಿಯ ಇಂದಿರಾನಗರ ಪ್ರದೇಶದಲ್ಲಿ ಹುಲ್ಲುಗಾವಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 8 ಎಕರೆ ಪ್ರದೇಶ ಸುಟ್ಟುಕರಕಲಾದ ಘಟನೆ ನಡೆದಿದೆ. ಸುಮಾರು 6 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದರು.

ಇಂದಿರಾನಗರ ಪ್ರದೇಶದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು, ಸುತ್ತಮುತ್ತಲಿನ ಖಾಲಿ ಜಾಗಗಳಲ್ಲಿ ಆಳೆತ್ತರದ ಹುಲ್ಲುಗಿಡಗಳು ದಟ್ಟವಾಗಿ ಬೆಳೆದುಕೊಂಡಿದ್ದವು. ಈ ನಡುವೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕ್ಷಣಾರ್ಧದಲ್ಲೇ ವ್ಯಾಪಿಸಿ ಇಡೀ ಪ್ರದೇಶವನ್ನು ಆವರಿಸಿತು. ಇದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ಅಗ್ನಿಶಾಮಕ ಠಾಣೆಗೆ ಘಟನೆ ಕುರಿತು ಮಾಹಿತಿ ತಲುಪುತ್ತಿದ್ದಂತೆ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ನಂತರ ಹರಸಾಹಸಪಟ್ಟು ಸುಮಾರು 6 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಸಂಜೆ ಸುಮಾರು 4.30ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಯ ಪ್ರಯತ್ನದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಅಚ್ಚುತ ಕರ್ಕೆರಾ, ಹರಿಪ್ರಸಾದ್ ಶೆಟ್ಟಿಗಾರ ಹಾಗೂ ಚಾಲಕರಾದ ಜಯಮೂಲ್ಯ, ನಿತ್ಯಾನಂದ ಮತ್ತು ಬಸವರಾಜ್ ಭಾಗವಹಿಸಿದ್ದರು.