ಕಾಸರಗೋಡು, ಮಾ. 11 (DaijiworldNews/TA): ಕಾರು ಮತ್ತು ಬಸ್ ಪರಸ್ಪರ ಬಡಿದು ಕಾರು ಪ್ರಯಾಣಿಕರಾದ ನಾಲ್ವರು ಮತ್ತು ಬಸ್ ಪ್ರಯಾಣಿಕರಾದ ಎಂಟು ಮಂದಿ ಸೇರಿದಂತೆ 12 ಮಂದಿ ಗಾಯಗೊಂಡ ಘಟನೆ ಕಾಸರಗೋಡು ಕುಂಬಳೆ ಶಾಂತಿಪಳ್ಳ ತಿರುವಿನಲ್ಲಿ ಬುಧವಾರ ನಡೆದಿದೆ. ಗಾಯಾಳುಗಳ ಪೈಕಿ ಕಾರು ಪ್ರಯಾಣಿಕನೊಬ್ಬನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.



ಬದಿಯಡ್ಕ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಕುಂಬಳೆಗೆ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಬಡಿದು ಅಪಘಾತ ಉಂಟಾಗಿದೆ. ಕಾರಿನಲ್ಲಿದ್ದ ಆಲಂಪಾಡಿ ನಿವಾಸಿಗಳಾದ ಮಾಲಿಕ್, ತಾಜುದ್ದೀನ್, ಕಬೀರ್, ಸಿದಾನ್ ಎಂಬವರು ಗಾಯಗೊಂಡಿದ್ದು, ಈ ಪೈಕಿ ಸಿದಾನ್ ನನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಉಳಿದ ಮೂವರು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.
ಬಸ್ಸಿನಲ್ಲಿದ್ದ ಕಾಸರಗೋಡು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ. ಮುಸ್ಕಾನ, ಕಂಚಿಕಟ್ಟೆಯ ಸುಜಾತ(40), ಸೂರಂಬೈಲು ನಿವಾಸಿ ಹಾಗೂ ಕುಂಜತ್ತೂರು ಶಾಲಾಧ್ಯಾಪಕಿ ದೀಪ್ತಿ (22) ಸೇರಿದಂತೆ ಎಂಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ. ಕಾರಿನೊಳಗೆ ಸಿಲುಕಿದ್ದವರನ್ನು ನಾಗರಿಕರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು.