ಮಂಗಳೂರು, ಮಾ. 02 (DaijiworldNews/AA): ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್ಗಳಿಗೆ ಒಳಪಟ್ಟ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳ ನಿರ್ವಹಿಸಿದ ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಿಗೆ ಕೆಲಸದ ಬಿಲ್ ಪಾವತಿಗೆ ಶೇ.4ರಂತೆ 22,600 ರೂ. ಕೊಡಬೇಕು ಎಂಬುದಾಗಿ ಲಂಚದ ಬೇಡಿಕೆ ಇರಿಸಿದ್ದ ಮಂಗಳೂರು ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕನನ್ನು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ತಂಡ ರೆಡ್ಹ್ಯಾಂಡ್ ಆಗಿ ಬಂಧಿಸಿದೆ.

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಸ್.ಡಿ.ಎ ಸಂಪತ್ ಅವರನ್ನು ಬಂಧಿಸಲಾಗಿದೆ.
ದೂರುದಾರರು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದು, 2025 ರ ಸಾಲಿನಲ್ಲಿ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್ಗಳಿಗೆ ಒಳಪಟ್ಟ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದರು.
ಈ ಕೆಲಸದ ಬಿಲ್ಗೆ 4 ಪರ್ಸೆಂಟ್ನಂತೆ ಒಟ್ಟು 22,600 ರೂ. ಕೊಡಬೇಕು ಎಂಬುದಾಗಿ ಮಂಗಳೂರಿನ ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿಯ ಎಸ್.ಡಿ.ಎ ಸಂಪತ್ ರವರು ದೂರುದಾರರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಫೆ. 2ರಂದು ಆರೋಪಿ ಸಂಪತ್ ದೂರುದಾರರಿಂದ 22,600 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಮಂಗಳೂರು ವಿಭಾಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಬಿ.ಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಸುರೇಶ್ ಕುಮಾರ್.ಪಿ, ಡಾ. ಗಾನ ಪಿ ಕುಮಾರ್, ಪಿ.ಐ ಭಾರತಿ ಜಿ, ರವರ ಉಸ್ತುವಾರಿಯಲ್ಲಿ ಪೊಲೀಸ್ ನಿರೀಕ್ಷಕರಾದ ಚಂದ್ರಶೇಖರ್ ಕೆ.ಎನ್. ಅವರು ಸಿಬ್ಬಂದಿಗಳಾದ ರಾಜಪ್ಪ, ಮಹೇಶ್, ಆದರ್ಶ್, ರಾಮ ನಾಯ್ಕ, ಗಂಗಣ್ಣ, ಮಹಾದೇವ, ಪವಿತ್ರ, ಲಕ್ಷ್ಮೀ, ರವಿ ಪವಾರ್, ನವೀನ್ ರವರ ಕಾರ್ಯಾಚರಣೆಯನ್ನು ನಡೆಸಿರುತ್ತಾರೆ.