ಕಾಸರಗೋಡು,ಫೆ. 15 (DaijiworldNews/AK): ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ರಭಾವಿ ’ಚಿನ್ನು ಪಾಪು; ಅವರ ಇತ್ತೀಚಿನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆಘಾತಕಾರಿ ಬೆಳವಣಿಗೆಯೊಂದ ನಡೆದಿದೆ. ಚಿನ್ನು ಪಾಪು ಎಂದು ಜನಪ್ರಿಯರಾಗಿದ್ದ ರೇಷ್ಮಾ ಕೆ ಅವರ ಸಾವಿನ ಕೆಲವೇ ದಿನಗಳ ಬಳಿಕ ಅವರ ಆಪ್ತ ಸ್ನೇಹಿತ ಸಂದೇಶ್ ಕೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮನ್ನಿಪಾಡಿಯಲ್ಲಿರುವ ತಮ್ಮ ನಿವಾಸದ ಕೋಣೆಯಲ್ಲಿ ಸಂದೇಶ್ ಕೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಂದೇಶ್ ಅವರು ಸಾಮಾಜಿಕ ಮಾಧ್ಯಮ ಪ್ರಭಾವಿ, Instagram ನಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಚಿನ್ನು ಪಾಪು ಎಂದೇ ಪರಿಚಿತರಾಗಿದ್ದ ರೇಷ್ಮಾ ಕೆ ಅವರ ಆಪ್ತ ಸ್ನೇಹಿತರಾಗಿದ್ದರು.
ಫೆ. 9ರಂದು ರೇಷ್ಮಾ ಕಾಸರಗೋಡು ಸಮೀಪದ ಕುಡ್ಲುವಿನ ಆಝಾದ್ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಆತ್ಮಹತ್ಯೆ ಎಂದು ಶಂಕಿಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ರೇಷ್ಮಾ ಸಾವಿನ ತನಿಖೆಯ ಭಾಗವಾಗಿ ಸಂದೇಶ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ರೇಷ್ಮಾ ಸಾವಿನ ನಂತರ ಸಂದೇಶ್ ಮಾನಸಿಕವಾಗಿ ತೀವ್ರ ನೊಂದಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಭಾನುವಾರ ಮಧ್ಯಾಹ್ನ ನಡೆದ ಈ ಘಟನೆ ಸಂಬಂಧಿಸಿದಂತೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.