ಬೆಳ್ತಂಗಡಿ, ಫೆ. 13 (DaijiworldNews/AA): ಜೇನು ಕೃಷಿ ಅಧ್ಯಯನ ಪ್ರವಾಸಕ್ಕಾಗಿ ಶಾಲಾ ಮಕ್ಕಳನ್ನು ತೆರೆದ ಪಿಕ್ಅಪ್ ಮತ್ತು ಟಿಪ್ಪರ್ ಲಾರಿಗಳಲ್ಲಿ ಕರೆದೊಯ್ದ ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅವರನ್ನು ಅಮಾನತುಗೊಳಿಸಿದೆ. ಈ ಸಂಬAಧ ವೇಣೂರು ಪೊಲೀಸ್ ಠಾಣೆಯಲ್ಲಿ ಎರಡು ವಾಹನಗಳು ಮತ್ತು ಚಾಲಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಫೆಬ್ರವರಿ 9 ರಂದು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅವರ ನೇತೃತ್ವದಲ್ಲಿ ಮಕ್ಕಳನ್ನು ಪಿಕಪ್ ಮತ್ತು ಟಿಪ್ಪರ್ ವಾಹನಗಳಲ್ಲಿ ಸ್ಥಳೀಯ ನಾಲ್ಕೂರು ಅನಿಲ್ ಫಾರ್ಮ್ಗೆ ಕರೆದೊಯ್ದು ಮರಳಿ ಕರೆತರಲಾಗಿತ್ತು. ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಬೆಳ್ತಂಗಡಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಫೆಬ್ರವರಿ 12 ರಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರ್ತವ್ಯ ಲೋಪ ಮತ್ತು ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಬಳೆಂಜ ನಿವಾಸಿ ಧರಣೇಂದ್ರ ಅವರು ನೀಡಿದ ದೂರಿನ ಆಧಾರದ ಮೇಲೆ, ಪಿಕಪ್ ಚಾಲಕ ನವೀನ್ ಮತ್ತು ಟಿಪ್ಪರ್ ಚಾಲಕ ಪ್ರವೀಣ್ ಎಂಬವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.