ಬಂಟ್ವಾಳ, ಫೆ. 11 (DaijiworldNews/AA): ಯಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿ ಜನಪರ ನರೇಗಾ ಯೋಜನೆ ಜಾರಿಗೊಂಡಿದ್ದು, ಆದರೆ ಗ್ರಾಮೀಣ ಜನತೆಯ ಉದ್ಯೋಗ ಕಸಿಯುವ ದೃಷ್ಟಿಯಿಂದ ಕೇಂದ್ರ ಸರ್ಕಾರ ನರೇಗಾ ಮೂಲಸ್ವರೂಪ ಬದಲಾವಣೆ ಮಾಡಿದೆ ಎಂದು ಕೆಪಿಸಿಸಿ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.


ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರು ಹಾಗೂ ಸ್ವರೂಪ ಬದಲಿಸಿರುವುದನ್ನು ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿರುವ ಮನರೇಗಾ ಬಚಾವ್ ಸಂಗ್ರಾಮ ಪಾದಯಾತ್ರೆಯ ಭಾಗವಾಗಿ ಮುಡಿಪು ಹಾಗೂ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಫರಂಗಿಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
"ಪುಣ್ಯಾತ್ಮನ ಹೆಸರು ಬೇಕು ಎಂಬ ಕಾರಣಕ್ಕೆ ಗ್ರಾಮಸ್ವರಾಜ್ಯದ ಕಲ್ಪನೆಯ ಮಾಡಿದ್ದ ಮಹಾತ್ಮಾ ಗಾಂಧಿ ಅವರ ಹೆಸರನ್ನು ಇಡಲಾಗಿದ್ದು, ಆದರೆ ಈಗಿನ ಸರಕಾರದ ಗಾಂಧಿಯ ಕೊಲೆಯನ್ನು ಸಮರ್ಥಿಸುವ ಧ್ಯೇಯವನ್ನು ಹೊಂದಿರುವ ಕಾರಣಕ್ಕೆ ಗಾಂಧಿಯ ಹೆಸರು ಬದಲಾವಣೆ ಮಾಡಿರುವುದರಲ್ಲಿ ಅಚ್ಚರಿ ಇಲ್ಲ. ಕಾಂಗ್ರೆಸ್ ಯೋಜನೆಯನ್ನು ಜಾರಿಗೆ ತರುವಾಗ ಗ್ರಾಮೀಣ ಜನತೆಗೆ ಉದ್ಯೋಗ ಕೊಡುವ ಯೋಚನೆ ಇತ್ತೇ ಹೊರತು ಜಾತಿ, ಧರ್ಮದ ಆಲೋಚನೆಗಳೇ ಇರಲಿಲ್ಲ. ವರ್ಷದ 365 ದಿನವೂ ಉದ್ಯೋಗ ನೀಡಿ ಹಳ್ಳಿಯಲ್ಲೇ ಉದ್ಯೋಗ ನಿರ್ಧಾರವಾಗುತ್ತಿದ್ದು, ಆದರೆ ಈಗಿನ ಬದಲಾವಣೆಯಿಂದ ಹಳ್ಳಿಯ ಕೆಲಸಗಳು ಹೊಸದಿಲ್ಲಿಯಲ್ಲಿ ನಿರ್ಧಾರವಾಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾಂಗ್ರೆಸ್ ನಿರಂತರವಾಗಿ ಹೋರಾಟದ ಮೂಲಕ ನಿಮ್ಮ ಕೈಯಲ್ಲೇ ಹಿಂದಿನ ಸ್ವರೂಪಕ್ಕೆ ತಂದು ನಿಲ್ಲಿಸುತ್ತೇವೆ. ಮುಂದಿನ ಅವಧಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬರುವುದು ಶತಸಿದ್ಧ" ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ನಿಗಮಗಳ ಅಧ್ಯಕ್ಷರಾದ ಡಿ.ಎಸ್.ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಪ್ಪಿ, ಉಷಾ ಅಂಚನ್, ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಉಳ್ಳಾಲ ಬ್ಲಾಕ್ ರಮೇಶ್ ಬೋಳ್ಯಾರ್, ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಬ್ಬಾಸ್ ಆಲಿ, ಶಾಹುಲ್ ಹಮೀದ್, ವೃಂದಾ ಮೇರಮಜಲು, ಶೈಲಜಾ ರಾಜೇಶ್ ಮೊದಲಾದವರಿದ್ದರು.
ಕೆಪಿಸಿಸಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಸ್ವಾಗತಿಸಿದರು. ಇರಾ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.