ಮಂಗಳೂರು, ಫೆ. 08 (DaijiworldNews/TA): ತೀವ್ರ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದ 14 ವರ್ಷದ ಬಾಲಕಿಯೊಬ್ಬಳಿಗೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯರು ರೋಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ ಮರುಜನ್ಮ ನೀಡಿರುವ ಘಟನೆ ವೈದ್ಯಕೀಯ ಕ್ಷೇತ್ರದಲ್ಲಿ ಗಮನ ಸೆಳೆದಿದೆ.

ಬಾಲಕಿಯನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ ಬಳಿಕ ವೈದ್ಯಕೀಯ ತಂಡ ಸಂಪೂರ್ಣ ತಪಾಸಣೆ ನಡೆಸಿತು. ಪರಿಶೀಲನೆ ವೇಳೆ ಬಾಲಕಿಯ ಯಕೃತ್ತಿನ ಕಾಡೇಟ್ ಲೋಬ್ನಲ್ಲಿ ದೊಡ್ಡ ಗಾತ್ರದ ಗೆಡ್ಡೆ ಇರುವುದನ್ನು ಪತ್ತೆ ಹಚ್ಚಲಾಯಿತು. ಇಂತಹ ದೊಡ್ಡ ಪಿತ್ತಜನಕಾಂಗದ ಗೆಡ್ಡೆಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಅವು ಒಡೆದು, ನಿಯಂತ್ರಿಸಲಾಗದ ಅತೀವ ರಕ್ತಸ್ರಾವ ಉಂಟಾಗುವ ಗಂಭೀರ ಅಪಾಯವಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಖ್ಯ ರಕ್ತನಾಳವಾದ ವೆನಾ ಕ್ಯಾವಾ ಸಮೀಪ ಗೆಡ್ಡೆ ಇರುವುದರಿಂದ ತೆರೆದ ಶಸ್ತ್ರಚಿಕಿತ್ಸೆ ಅತ್ಯಂತ ಅಪಾಯಕಾರಿಯಾಗಿದೆ ಎಂಬುದನ್ನು ಮನಗಂಡ ವೈದ್ಯರು, ಮಕ್ಕಳ ಶಸ್ತ್ರಚಿಕಿತ್ಸಾ ತಂಡ ಹಾಗೂ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ಗಳ ಸಹಯೋಗದಲ್ಲಿ ರೋಬೋಟಿಕ್ ಅಸಿಸ್ಟೆಡ್ ಲಿವರ್ ರಿಸೆಕ್ಷನ್ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದರು.
ಸುಮಾರು 11 ಗಂಟೆಗಳ ಕಾಲ ನಡೆದ ಈ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಯನ್ನು, ಜಿಪ್ಮರ್ (JIPMER), ಪಾಂಡಿಚೇರಿ ಸಂಸ್ಥೆಯ ಪ್ರಖ್ಯಾತ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಕಲಯರಸನ್ ರಾಜಾ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.
ಶಸ್ತ್ರಚಿಕಿತ್ಸೆ ವೇಳೆ ಕಡಿಮೆ ರಕ್ತದೊತ್ತಡ ಮತ್ತು ಹೆಚ್ಚಿನ ರಕ್ತಸ್ರಾವ ಸಂಭವಿಸುವ ಸಾಧ್ಯತೆ ಇದ್ದುದರಿಂದ ಅರಿವಳಿಕೆ ನೀಡುವ ಪ್ರಕ್ರಿಯೆಯೂ ಅತ್ಯಂತ ಸವಾಲಿನದ್ದಾಗಿತ್ತು. ಆದರೆ ತಜ್ಞ ಅರಿವಳಿಕೆ ತಂಡವು ಈ ಸಂಕೀರ್ಣ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದೆ.
ಈ ಯಶಸ್ವಿ ರೋಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ ಬಾಲಕಿಗೆ ಹೊಸ ಜೀವನ ದೊರಕಿದ್ದು, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ನೈಪುಣ್ಯ ಮತ್ತು ಮಾನವೀಯ ಸೇವೆಯ ಮತ್ತೊಂದು ಉದಾಹರಣೆಯಾಗಿದೆ.