ಸುಳ್ಯ, ಜ. 21 (DaijiworldNews/ TA): ಶಿಥಿಲಗೊಂಡಿದ್ದ ಕಿರು ಸೇತುವೆ ಮೇಲೆ ಜಲ್ಲಿ ತುಂಬಿದ ಲಾರಿ ಚಲಿಸಿ ಸೇತುವೆ ಕುಸಿದು ಲಾರಿ ತೋಡಿಗೆ ಬಿದ್ದ ಘಟನೆ ಮಂಡೆಕೋಲು ಗ್ರಾಮದ ಉದ್ದಂತಡ್ಕ ಎಂಬಲ್ಲಿ ಸೋಮವಾರ ಸಂಭವಿಸಿದೆ. ಈ ಘಟನೆಯಲ್ಲಿ ಲಾರಿಯ ಚಾಲಕ ಗಾಯಗೊಂಡಿದ್ದಾರೆ.

ಸುಳ್ಯ ಮಂಡೆಕೋಲು ಗ್ರಾಮದ ಪೇರಾಲು - ಉದ್ದಂತಡ್ಕ - ಮೇನಾಲ ಸಂಪರ್ಕಿಸುವ ರಸ್ತೆಯ ಉದ್ದಂತಡ್ಕ ಎಂಬಲ್ಲಿ ಸಣ್ಣ ಸೇತುವೆ ಕಳೆದ ಮಳೆಗಾಲ ಸಂದರ್ಭ ಮಣ್ಣು ಕುಸಿದು ಶಿಥಿಲಗೊಂಡಿತ್ತು. ಇದರಿಂದ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಮಂಡೆಕೋಲು ಗ್ರಾ.ಪಂ. ಕೂಡ ಸೇತುವೆ ಮೇಲೆ ವಾಹನ ಸಂಚಾರ ನಿಷೇಧ ಮಾಡಿ ಫಲಕ ಅಳವಡಿಸಿತ್ತು.
ಸೋಮವಾರ ಸಂಜೆ ಕಾಲು ಸೇತುವೆಯ ಮೇಲೆ ಜಲ್ಲಿ ತುಂಬಿದ ಲಾರಿ ಸಂಚರಿಸಿದ ಪರಿಣಾಮ ಸೇತುವೆ ಕುಸಿದಿದ್ದು, ಸೇತುವೆಯಲ್ಲಿದ್ದ ಟಿಪ್ಪರ್ ತೋಡಿಗೆ ಬಿದ್ದು ಹಾನಿಗೊಂಡಿದ್ದು ಚಾಲಕನಿಗೆ ಗಾಯವಾಗಿದೆ.