ಉಡುಪಿ, ಜ. 16 (DaijiworldNews/AA): ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಅಕ್ಟೋಬರ್ 30 ರಂದು ಮಣಿಪಾಲದ ಕಾಯಿನ್ ಸರ್ಕಲ್ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದು ಕಳುವಾದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಿವಮೊಗ್ಗ ಮೂಲದ ಕಿರಣ್ ಬಿ.ಎನ್ (32) ಮತ್ತು ಯೋಗೇಶ್ ನಾಯ್ಕ್ ಎನ್ (22) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕಿರಣ್ ಬಿ.ಎನ್ ವಿರುದ್ಧ ಈಗಾಗಲೇ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ ಅವರ ಮಾರ್ಗದರ್ಶನದಲ್ಲಿ ಹಾಗೂ ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ತಂಡದಲ್ಲಿ ಉಪನಿರೀಕ್ಷಕರಾದ ಅನಿಲ್ ಬಿ.ಎಂ, ಅಕ್ಷಯಾ ಕುಮಾರಿ ಎಸ್.ಎನ್ ಹಾಗೂ ಸಿಬ್ಬಂದಿಗಳಾದ ವಿಶ್ವಜಿತ್, ಚೇತನ್, ಅಜ್ಮಲ್, ರವಿರಾಜ್ ಮತ್ತು ಮಂಜುನಾಥ ಅವರು ಭಾಗವಹಿಸಿದ್ದರು.