ಉಳ್ಳಾಲ, ಡಿ. 26 (DaijiworldNews/TA): ಹಝ್ರತ್ ಅಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿ ಮಂಜನಾಡಿ ಉರೂಸ್ ಗೆ ಹಿಂದೂ ಬಾಂಧವರಿಂದ ಸೌಹಾರ್ದತೆಯ ಹೊರೆಕಾಣಿಕೆ ಅರ್ಪಿಸಲಾಯಿತು. ಈ ಮೂಲಕ ಮತೀಯ ಸೌಹಾರ್ದಕ್ಕೆ ಮಂಜನಾಡಿ ಉರೂಸ್ ಸಾಕ್ಷಿಯಾಯಿತು.


ನಿತ್ಯಾನಂದ ಸೇವಾ ಸಮಿತಿ ನಿತ್ಯಾನಂದ ನಗರ, ಹನುಮಾನ್ ಫ್ರೆಂಡ್ಸ್ ಹಿಂದೂಪುರ ಅಸೈಗೋಳಿ, ಟೀಮ್ ಅಸೈಗೋಳಿ,ಶಕ್ತಿ ಫ್ರೆಂಡ್ಸ್ ಆಕಾಶಭವನ ಮಂಗಳೂರು, ಸ್ನೇಹ ಬಳಗ ಮಂಗಳೂರು, ಓಂ ಶಕ್ತಿ ಮಂಗಳೂರು, ಬರ್ಕೆ ಫ್ರೆಂಡ್ಸ್ ಕುದ್ರೋಳಿ, ಬ್ರದರ್ಸ್ ಕೊಲ್ಯ, ಸಾಯಿ ಫ್ರೆಂಡ್ಸ್ ಅಸೈಗೋಳಿ ಅವರಿಂದ ಮಂಜನಾಡಿ ಉರೂಸ್ ಗೆ ಅಸೈಗೋಳಿ ಜಂಕ್ಷನ್ ನಿಂದ ಮಂಜನಾಡಿ ಕೇಂದ್ರ ಮಸೀದಿ ತನಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
15ಕ್ವಿಂಟಾಲ್ ಅಕ್ಕಿ, ಸಕ್ಕರೆ, ತರಕಾರಿ ಇತರ ಸಾಮಾಗ್ರಿಯನ್ನು ಮೆರವಣಿಗೆ ಮೂಲಕ ತರಲಾಯಿತು. ಸಾಯಿ ಫ್ರೆಂಡ್ಸ್ ಅಸೈಗೋಳಿ ಅಧ್ಯಕ್ಷ ಸುನಿಲ್ ಪೂಜಾರಿ ಮಾತನಾಡಿ, ನಾವೆಲ್ಲರೂ ಒಂದಾಗಿರಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಈ ಉರೂಸ್ ಕಾರ್ಯಕ್ರಮವನ್ನು ಯಶಸ್ವಿ ಮಾಡುವ ಎಂದು ತಿಳಿಸಿದರು. ಮಂಜನಾಡಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಮಾತನಾಡಿ, ಡಿಸೆಂಬರ್ ೧೭ರಿಂದ ಉರೂಸ್ ಪ್ರಾರಂಭವಾಗುವಾಗ ನಮ್ಮ ಹಿಂದೂ ಸಹೋದರರು ಹೊರೆಕಾಣಿಕೆ ನೀಡುತ್ತೇವೆಂದು ಹೇಳಿದ್ದರು, ಅದಕ್ಕೆ ನಾವು ಸಂತೋಷದಿಂದ ಒಪ್ಪಿದ್ದೆವು. ಇಂದು ನಮ್ಮ ಮಸೀದಿಗೆ ಹೊರಕಾಣಿಕೆ ನೀಡಿದ್ದಾರೆ ಎಂದರು.
ಮಂಜನಾಡಿ ಜುಮಾ ಮಸೀದಿಯ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ ಮಾತನಾಡಿ ಹಝ್ರತ್ ಅಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿ ಮಂಜನಾಡಿ ಉರೂಸ್ ಗೆ ಜಮಾಅತ್ ಮೇಲೆ ಹಾಗೂ ಅಧ್ಯಕ್ಷ ಮತ್ತು ಕಮಿಟಿ ಸದಸ್ಯರ ಮೇಲಿನ ಮತ್ತು ಮುಸ್ಲಿಂ ಬಾಂಧವರ ಮೇಲಿನ ಅಭಿಮಾನದಿಂದ ನಮ್ಮ ಬಹುಸಂಖ್ಯಾತ ಸಮುದಾಯದ ಹಿಂದೂ ಸಹೋದರರು ಹೊರೆಕಾಣಿಕೆಯೊಂದಿಗೆ ಭಾವೈಕ್ಯತೆ, ಸಹೋದರತೆ ಸಹಬಾಳ್ವೆಯ ಸಂಕೇತವನ್ನು ನೀಡಿದ್ದಾರೆ ಎಂದರು. ಪ್ರದೀಪ್ ಅಸೈಗೋಳಿ, ಶ್ರೀಕಾಂತ್, ಅಶ್ರಫ್, ಶೌಕತ್ ಆಳಿ ಅಸೈಗೋಳಿ, ಪ್ರವೀಣ್ ಮುನ್ನ, ಹರೀಶ್ ಪೂಜಾರಿ, ಕೆ. ಮಂಜುನಾಥ್, ವಿಕ್ಕಿ ಪೂಜಾರಿ ಮಂಗಳೂರು, ನಾಗರಾಜ್ ಶೆಟ್ಟಿ ಮಾಣಿ, ಪ್ರೀತಂ ಶೆಟ್ಟಿ ಆಲಾಡಿ, ಇಕ್ಬಾಲ್ ಬರುವ ಮೊದಲಾದವರು ಉಪಸ್ಥಿತರಿದ್ದರು.