ಉಡುಪಿ, ಡಿ. 20 (DaijiworldNews/TA): ಖಾಸಗಿ ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ಹಂದಾಡಿ ಗ್ರಾಮದ ಅಂಬಿಕಾ ಪಾರಂ ಬಳಿ ಡಿ.19ರಂದು ನಡೆದಿದೆ. ಮೃತರನ್ನು ಪವನ್ ಎಂದು ಗುರುತಿಸಲಾಗಿದೆ.

ಇವರು ತನ್ನ ಬೈಕಿನಲ್ಲಿ ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆ ರಸ್ತೆಯಲ್ಲಿ ಬಂದು, ಬಲಗಡೆ ಇಂಡಿಕೇಟರ್ ಹಾಕಿ ಅಂಬಿಕಾ ಫಾರಂ ಬಳಿಯ ಅಮ್ಮ ಶಾಮಿಯಾನ್ ಅಂಗಡಿ ಕಡೆಗೆ ತಿರುಗಿಸುತ್ತಿದ್ದಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಬಸ್, ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ಬೈಕ್ ಸವಾರ ಪವನ್, ಬಸ್ಸಿಗೆ ಬಡಿದು ರಸ್ತೆಗೆ ಬಿದ್ದು ಉರುಳಿಕೊಂಡು ರಸ್ತೆ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದರೆನ್ನಲಾಗಿದೆ. ಬಸ್, ಬೈಕ್ನ್ನು ಸುಮಾರು 50 ಅಡಿ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ನಿಂತಿತು. ಅಪಘಾತದಿಂದ ಗಂಭೀರ ವಾಗಿ ಗಾಯಗೊಂಡಿದ್ದ ಪವನ್, ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.