ಮಂಗಳೂರು, ಡಿ. 20 (DaijiworldNews/TA): ದ.ಕ. ಜಿಲ್ಲಾಡಳಿತದ ವತಿಯಿಂದ ಡಿ.20ರಿಂದ 2026ರ ಜನವರಿ 2ರವರೆಗೆ ಪ್ರತೀ ದಿನ ಸಂಜೆ 5ರ ಬಳಿಕ ನಗರದಲ್ಲಿ ನಡೆಯುವ ಕರಾವಳಿ ಉತ್ಸವದ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಲಹೆ-ಸೂಚನೆ ನೀಡಿದೆ.

ಈ ಅವಧಿಯಲ್ಲಿ ದಿನನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದರಿಂದ ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳು ಸೇರಲಿದೆ. ಇದರಿಂದ ನಗರದ ಕೆಲವು ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇವೆ. ಹಾಗಾಗಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಲಹೆ-ಸೂಚನೆಗಳನ್ನು ನೀಡಿದೆ. ಲಾಲ್ಬಾಗ್ನಿಂದ ಕರಾವಳಿ ಮೈದಾನದವರೆಗಿನ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್ಗಳನ್ನು ಅಳವಡಿಸಿದ್ದು ಮಾರ್ಗಸೂಚಿಯನ್ನು ಅನುಸರಿಸಬೇಕು.
ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಉರ್ವ ಮಾರ್ಕೆಟ್ ಮೈದಾನದಲ್ಲಿ (ಕಾರು), ಗಾಂಧಿನಗರ ಸರಕಾರಿ ಶಾಲೆ (ಪ್ರೆಸ್ಕ್ಲಬ್)ಯ ಬಳಿ (ದ್ವಿಚಕ್ರ/ಕಾರು), ಲೇಡಿಹಿಲ್ ಚರ್ಚ್ ಪಾರ್ಕಿಂಗ್ (ದ್ವಿಚಕ್ರ/ಕಾರು), ಮಣ್ಣಗುಡ್ಡ ಕೆನರಾ ಸ್ಕೂಲ್ ಮೈದಾನದಲ್ಲಿ (ದ್ವಿಚಕ್ರ/ಕಾರು), ತಿಮ್ಮಪ್ಪಹೋಟೆಲ್ ಆವರಣದಲ್ಲಿ (ದ್ವಿಚಕ್ರ/ಕಾರು), ಸ್ಕೌಟ್ ಗೈಡ್ ಹಾಲ್ ಆವರಣ ದಲ್ಲಿ (ಕರಾವಳಿ ಮೈದಾನ ಹಿಂಭಾಗ) (ದ್ವಿಚಕ್ರ),ಉರ್ವ ಮಾರ್ಕೆಟ್ ರಸ್ತೆ- (ದ್ವಿಚಕ್ರ), ಹ್ಯಾಟ್ ಹಿಲ್ ರಸ್ತೆ (ದ್ವಿಚಕ್ರ)ಯಲ್ಲಿ ಪಾರ್ಕಿಂಗ್ಗೆ ಸ್ಥಳ ನಿಗದಿಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದೆ.