ಸುಳ್ಯ, ಡಿ. 12 (DaijiworldNews/AA): ಕಳೆದ 35 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ತಳಮಟ್ಟದ ರಾಜಕೀಯದಿಂದ ಕೇಂದ್ರದ ರಾಜಕೀಯದವರೆಗೆ ನಾನು ಮುಟ್ಟಿದ್ದೇನೆ. ಆದ್ದರಿಂದ ಬೇರೆ ಬೇರೆ ಪಕ್ಷದಿಂದ ಬಂದವರು ಅಥವಾ ಹೋದವರಿಂದ ನಾನು ರಾಜಕೀಯ ಪಾಠ ಕಲಿಯಬೇಕಾಗಿಲ್ಲ ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ತಿಳಿಸಿದರು.


ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅರಂತೋಡು ಗ್ರಾಮಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಂದಿದ್ದೇನೆ. ಕೆಲವರು ತನ್ನ ವಿರುದ್ಧ ಹೈಕಮಾಂಡ್ ಗೆ ದೂರು ನೀಡುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿ ಬಂದಿದೆ. ದೂರು ನೀಡುವವರು ಮೊದಲು ಬ್ಲಾಕ್, ಡಿಸಿಸಿಗೆ ನೀಡಲಿ. ಅದು ಬಿಟ್ಟು ಹೈಕಮಾಂಡ್ ಗೆ ದೂರು ನೀಡುವ ಕ್ರಮ ಪಕ್ಷದಲ್ಲಿ ಇಲ್ಲ" ಎಂದರು.
"ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಜಿ.ಕೆ.ಯವರಿಂದ ಒಂದು ಸಣ್ಣ ತಪ್ಪು ಆಗಿದೆ ಆ ತಪ್ಪನ್ನು ತಿದ್ದಿಕೊಂಡು ಅವರು ಮತ್ತೆ ಪಕ್ಷದಲ್ಲಿ ದುಡಿಯುತ್ತಿದ್ದಾರೆ. ಅವರು ತಪ್ಪು ಮಾಡಿದ್ದಾರೆ ಎಂದು ನಿರಂತರವಾಗಿ ಅವರನ್ನು ಶಿಕ್ಷೆಗೆ ಒಳಪಡಿಸುವುದು ಸರಿಯಲ್ಲ. ಎರಡು ಬಾರಿ ಸಂಪಾಜೆ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದೆ. ಪ್ರಳಯ, ಭೂಕಂಪ ಆದ ಸಂದರ್ಭದಲ್ಲಿ ಉತ್ತಮ ಕೆಲಸವನ್ನು ಹಮೀದ್ ರವರು ಮಾಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ದುಡಿದಿದ್ದಾರೆ. ಅಭಿವೃದ್ಧಿ ಯಾರು ಮಾಡಿದರೂ ಅವರಿಗೆ ನಾವು ಬೆಂಬಲ ನೀಡುತ್ತೇವೆ" ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷೆ ಸುಂದರಿ ಮುಂಡಡ್ಕ, ಸದಸ್ಯೆ ವಿಮಲಾ ಪ್ರಸಾದ್, ಪ್ರಮುಖರಾದ ಸಲೀಂ ಪೆರುಂಗೋಡಿ, ಸಿದ್ದಿಕ್ ಕೊಕ್ಕೊ, ಅಜರುದ್ದೀನ್, ಮುನೀರ್ ದಾರಿಮಿ, ಜುನೈದ್ ಉಪಸ್ಥಿತರಿದ್ದರು.