ಮಂಗಳೂರು,ನ. 24 (DaijiworldNews/AK): ಎಡಪದವು ಎಂಬಲ್ಲಿ ಯುವಕನೋರ್ವನಿಗೆ 4 ಮಂದಿ ದುಷ್ಕರ್ಮಿಗಳ ತಂಡವೊಂದು ಚೂರಿ ಇರಿತ ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಎಡಪದವು ಪೂಪಾಡಿ ಕಲ್ಲು ನಿವಾಸಿ ಅಖಿಲೇಶ್ ಚೂರಿ ಇರಿತಗೆ ಒಳಗಾದವರು ಎಂದು ತಿಳಿದು ಬಂದಿದೆ. ಇವರ ಬಲಕೈಗೆ ಗಂಭೀರ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಅಖಿಲೇಶ್ ಅವರು ಎಡಪದವು ಕಡೆಯಿಂದ ಮಂಗಳೂರು ಕಡೆಗೆ ತನ್ನ ಆಕ್ಟಿವಾದಲ್ಲಿ ಹೋಗುತ್ತಿದ್ದ ಸಂದರ್ಭ ಎಡಪದವಿನಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ನಾಲ್ಕು ಮಂದಿ ದುಷ್ಕರ್ಮಿಗಳ ತಂಡ ಚೂರಿ ಇರಿತ ಮಾಡಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಅಖಿಲೇಶ್ ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇವರು ಸ್ಥಳೀಯವಾಗಿ ಕೇಟರಿಂಗ್ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.