ಉಡುಪಿ, ನ. 19 (DaijiworldNews/AA): ದ್ವೇಷ ಭಾಷಣ ಮಾಡಿದ ಆರೋಪದಡಿ, ಬಲಪಂಥೀಯ ಸಂಘಟನೆಯೊಂದರ ಮುಖಂಡ, ಅಜೆಕಾರು ನಿವಾಸಿ ರತ್ನಾಕರ ಅಮೀನ್ (49) ಅವರನ್ನು ಬಂಧಿಸಲಾಗಿದೆ.

ನವದೆಹಲಿ ಬಾಂಬ್ ಸ್ಫೋಟದ ಕುರಿತು ಇಸ್ಲಾಮಿಕ್ ಭಯೋತ್ಪಾದನೆ ಕೃತ್ಯವನ್ನು ಖಂಡಿಸಿ ನವೆಂಬರ್ 15 ರಂದು, ಉಡುಪಿ ತಾಲೂಕು ಹಿಂದೂ ಜಾಗರಣಾ ವೇದಿಕೆ ನಗರದ ಜಟ್ಕಾ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ರತ್ನಾಕರ ಅಮೀನ್ ಅವರು ಧರ್ಮಗಳ ನಡುವೆ ದ್ವೇಷ ಮೂಡಿಸುವ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಉಡುಪಿ ನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ನವೆಂಬರ್ 18 ರಂದು, ನಗರ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ವಿ. ಬಡಿಗೇರ ನೇತೃತ್ವದ ವಿಶೇಷ ತಂಡವು ಅವರನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.