ಮಂಗಳೂರು, ನ. 15 (DaijiworldNews/AA): ಸರಣಿ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಣಂಬೂರು ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.


ಮೃತರನ್ನು ಉಳ್ಳಾಲ ನಿವಾಸಿ, ಆಟೋ ಚಾಲಕ ಮೊಹಮ್ಮದ್ ಕುಂಚಿ (25), ಪ್ರಯಾಣಿಕರನ್ನು ಕೊಣಾಜೆ, ಮೊಂಟೆಪದವು ನಿವಾಸಿಗಳಾದ ಅಬೂಬಕರ್ (65) ಮತ್ತು ಇಬ್ರಾಹಿಂ (68) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಆನಂದ್ ಸನಿಲ್ ಅವರಿಗೂ ಗಾಯಗಳಾಗಿವೆ. ಟ್ರಕ್ ಚಾಲಕ ಮೊಹಮ್ಮದ್ ಶೇಖ್ ಅವರನ್ನು ಬಂಧಿಸಲಾಗಿದೆ.
ಪಣಂಬೂರು ಸಿಗ್ನಲ್ ನಲ್ಲಿ ವಾಹನಗಳು ನಿಂತಿತ್ತು ಎಂದು ಹೇಳಲಾಗಿದೆ. ಎದುರಿನಲ್ಲಿ ಒಂದು ಟ್ಯಾಂಕರ್ ನಿಂತಿದ್ದು, ಅದರ ಹಿಂಭಾಗದಲ್ಲಿ ಆಟೊ ರಿಕ್ಷಾ ನಿಂತಿತ್ತು. ಅದರ ಹಿಂದಿನಿಂದ ಬಂದ ಟ್ಯಾಂಕರ್ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ರಿಕ್ಷಾ ಎದುರಿನಲ್ಲಿ ನಿಂತಿದ್ದ ಕಾರಿಗೆ ಅಪ್ಪಳಿಸಿ ಬಳಿಕ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್ ಗೆ ಅಪ್ಪಳಿಸಿದೆ ಎನ್ನಲಾಗಿದೆ.
ಘಟನೆಯಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.