ಮಂಗಳೂರು, ,ನ. 14 (DaijiworldNews/AK): ಬಿಹಾರದಲ್ಲಿ ಎನ್.ಡಿ.ಎ ಭಾರೀ ಮುನ್ನಡೆ ಹಿನ್ನಲೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಚೇರಿ ಎದುರು ಸಂಭ್ರಮಾಚರಣೆ ಮಾಡಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ವಿಜಯೋತ್ಸವ ಆಚರಣೆ ಮಾಡಲಾಯಿತು. ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಕ್ಯಾ.ಗಣೇಶ್ ಕಾರ್ಣಿಕ್ ಸೇರಿದಂತೆ ವಿವಿಧ ಮುಖಂಡರು ಭಾಗಿಯಾದರು. ಪರಸ್ಪರ ಸಿಹಿ ಹಂಚಿಕೊಳ್ಳುವ ಗೆಲುವಿನ ಸಂಭ್ರಮಾಚರಣೆ ಮನೆಮಾಡಿತ್ತು.

ಬಳಿಕ ಬಿಹಾರ ಚುನಾವಣಾ ಫಲಿತಾಂಶದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ವೋಟ್ ಚೋರಿ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 135 ಸ್ಥಾನಗಳನ್ನು ಹೇಗೆ ಗೆದ್ದಿತು ಎಂದು ಪ್ರಶ್ನಿಸಿದ್ದ ಅವರು, ಬಿಜೆಪಿ ಗೆದ್ದರೆ ಮಾತ್ರ ವೋಟ್ ಚೋರಿ ಎನ್ನುವ ಮನೋಭಾವನೆಯನ್ನು ಖಂಡಿಸಿದ್ದಾರೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತು ಟೀಕೆ ಮಾಡಿರುವ ಅವರು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹದಗೆಟ್ಟ ರಸ್ತೆಗಳು, ಸಾರಿಗೆ ಬಸ್ಗಳ ದುರಸ್ತಿಗೆ ಹಣವಿಲ್ಲದಿರುವುದು, ಬೆಲೆ ಏರಿಕೆ, ಕಬ್ಬು ಬೆಳೆಗಾರರ ಸಮಸ್ಯೆಗಳು ಮತ್ತು ನೆರೆ ಪರಿಹಾರದ ಕೊರತೆಯನ್ನು ಪ್ರಸ್ತಾಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.