ಮಂಗಳೂರು, ನ. 08 (DaijiworldNews/AA): 'ಕಾವ್ಯಾಂ ವ್ಹಾಳೊ-8' ಶೀರ್ಷಿಕೆಯಡಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಸಭಾಂಗಣದಲ್ಲಿ ನವೆಂಬರ್ 8ರಂದು ಕವಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು.



















ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿದ ಅವರು, "ಅಕಾಡೆಮಿಯು ಪ್ರತಿ ತಿಂಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಓರ್ವ ಕೊಂಕಣಿ ವ್ಯಕ್ತಿಗೆ ಗೌರವ ಸಲ್ಲಿಸುತ್ತಾ ಬಂದಿದೆ. ಕವಿಗಳಿಗೆ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಲು ಅವಕಾಶ ಒದಗಿಸುವ ಜೊತೆ ಸಾಹಿತಿಗಳ ಜೊತೆ ಸಂವಾದ ನಡೆಸಿ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಿದೆ. ಈ ಕವಿಗೋಷ್ಟಿಯು ಪ್ರತಿ ಕವಿಗಳಿಗೆ ವೇದಿಕೆಯನ್ನು ಸೃಷ್ಟಿಸಿ, ಅವರನ್ನು ಪ್ರೋತ್ಸಾಹಿಸುತ್ತಿದೆ" ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.
ಖ್ಯಾತ ನಾಟಕಕಾರ ಹಾಗೂ ಚಲನಚಿತ್ರ ನಿರ್ಮಾಪಕರಾದ ಹೆನ್ರಿ ಡಿಸಿಲ್ವರವರನ್ನು ಸನ್ಮಾನಿಸಲಾಯಿತು. ಇವರು ಮಾತನಾಡಿ, '"ನಾನು ಮಾಡಿದ ಸಾಧನೆಗಳನ್ನು ಗಮಿನಿಸಿ ಅಕಾಡೆಮಿಯು ನನಗೆ ಗೌರವ ನೀಡಿದೆ. ನಿಮ್ಮ ಸಹಕಾರದಿಂದ, ನಾನು ಮಾಡಿದ ಸಿನೆಮಾಗಳು ಯಶಸ್ವಿಯಾಗಿದೆ" ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾದ ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣ ಕೊಂಪದವು ಇವರು ಕೊಂಕಣಿ ಅಕಾಡೆಮಿಯು ಕುಡುಬಿ ಜಾನಪದ ಸಮಾವೇಶವನ್ನು ಆಯೋಜಿಸಿದ್ದರಿಂದ, ಕುಡುಬಿ ಸಮಾಜದ ಜನತೆಗೆ ಹಾಗೂ ಸಂಘಟನೆಗಳಿಗೆ ಬಹಳಷ್ಟು ಅಭಿಮಾನ ಪಡುವಂತಾಗಿದೆ. ಈ ಸಮಾವೇಶವನ್ನು ಹಮ್ಮಿಕೊಂಡ ಕೊಂಕಣಿ ಅಕಾಡೆಮಿಗೆ ಕುಡುಬಿ ಸಮಾಜದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪ್ರಸ್ತುತ ಅಕಾಡೆಮಿಯ ಅಧ್ಯಕ್ಷರು ನಮ್ಮೆಲ್ಲಾ ಕುಡುಬಿ ಸಮಾಜದ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಅಧ್ಯಕ್ಷರನ್ನು ಪ್ರಶಂಸಿಸಿದರು.
ಕೊಂಕಣಿಯ ಖ್ಯಾತ ಕವಿ, ಪೊಯೆಟಿಕಾ ಪಂಗಡದ ಮುಖ್ಯಸ್ಥರಾದ ನವೀನ್ ಪಿರೇರಾರವರು ಹಲವು ಆಯಾಮಗಳಲ್ಲಿ ಕವಿತೆಗಳನ್ನು ರಚಿಸುವ ಬಗ್ಗೆ ವಿವರಣೆ ನೀಡಿದರು.
ಕವಿಗೋಷ್ಟಿಯನ್ನು ಐರಿನ್ ರೆಬೆಲ್ಲೊ ಅವರು ನಡೆಸಿಕೊಟ್ಟರು. ಮಾರ್ಸೆಲ್ ಡಿಸೋಜ (ಮಾಚ್ಚಾ ಮಿಲಾರ್), ಅಸುಂತಾ ಡಿಸೋಜ, ಸೃಜನಾ ಮಥಾಯಸ್, ಚಂದ್ರಿಕಾ ಮಲ್ಯ, ಫ್ಲಾವಿಯಾ ಅಲ್ಬುಕರ್ಕ್, ರವೀಂದ್ರ ನಾಯಕ ಸಣ್ಣಕ್ಕಿಬೆಟ್ಟು, ಪ್ರವೀಣ್ ತಾವ್ರೊ, ಜೀವನ್ ಕ್ರಾಸ್ತಾ, (ಜೀವ್ ನಿಡ್ಡೋಡಿ), ಲ್ಯಾನ್ಸಿ ಸಿಕ್ವೇರ ಸುರತ್ಕಲ್, ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.
ಅಕಾಡೆಮಿ ಸದಸ್ಯರಾದ ಸಮರ್ಥ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೊ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು.