ಮಂಗಳೂರು,ನ. 07 (DaijiworldNews/AK): ಸ್ವಾತಂತ್ರ್ಯ ಸಂಗ್ರಾಮದ ಪ್ರೇರಣಾ ಮಂತ್ರ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶಾದಾದ್ಯಂತ 150 ಕಡೆಗಳಲ್ಲಿ ವಂದೇ ಮಾತರಂ ಗೀತೆಯನ್ನು ಶುಕ್ರವಾರ ಹಾಡಲಾಯಿತು.

ಅದರಂತೆ ಮಂಗಳೂರಿನಲ್ಲಿರುವ ದ.ಕ ಜಿಲ್ಲಾ ಬಿಜೆಪಿ ಕಚೇರಿಯ ಮುಂದೆ ಬಿಜೆಪಿ ನಾಯರು, ಕಾರ್ಯಕರ್ತರ ಸಮ್ಮುಖದಲ್ಲಿ ಸಾಮೂಹಿಕವಾಗಿ ವಂದೇಮಾತರಂ ಗೀತೆಯನ್ನು ಹಾಡಲಾಯಿತು. ಸಾಮೂಹಿಕ ಗೀತೆಯ ನಂತರ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಇಂದು ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿದೆ. ಈ ಗೀತೆಯು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ವೀರ ಸೇನಾನಿಗಳು ಪರಕೀಯರ ವಿರುದ್ದ ಹೋರಾಡುವಂತೆ ಮಾಡಿತ್ತು. ಭಾರತೀಯರು ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಹುಟ್ಟುಹಾಕಿತ್ತು.
ಪ್ರಧಾನಿ ನರೇಂದ್ರ ಮೋದಿಜಿಯವರ ಕನಸಿನ ಕೂಸಾದ ವಿಕಸಿತ ಭಾರತದ ಕಲ್ಪನೆಗೂ ಈ ವಂದೇ ಮಾತರಂ ಗೀತೆ ಪ್ರೇರಣಾ ದಾಯಕವಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ , ಶಾಸಕರಾದ ವೇದವ್ಯಾಸ್ ಕಾಮತ್ , ವೈ. ಭರತ್ ಶೆಟ್ಟಿ , ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ , ಕಿಶೋರ್ ಕುಮಾರ್ , ವಂದೇ ಮಾತರಂ ಗೀತೆಯ ರಾಜ್ಯ ಸಂಚಾಲಕರಾದ ಶಾಮಲಾ ಕುಂದರ್ ಮುಂತಾದವರು ಉಪಸ್ಥಿತತರಿದ್ದರು.