ಪುತ್ತೂರು,ನ. 06 (DaijiworldNews/ AK): ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗೆ ಗುಂಡೇಟು ಘಟನೆಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 115/2025. ಕಲಂ 132, 109, 303(2) r/w 3(5) ಭಾರತೀಯ ನ್ಯಾಯ ಸಂಹಿತೆ 2023. ಮತ್ತು ಕಲಂ 4, 5, 6, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಕಾಯ್ದೆ & ಸಂರಕ್ಷಣಾ ಕಾಯ್ದೆ 2020 ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಖರೀದಿ ಮಾಡಿರುವ ರಶೀದಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ದಾಖಲೆಗಳ ಬಗ್ಗೆ ವಿಚಾರಿಸಿದಾಗ, ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿರವರು ದೃಢೀಕರಿಸಿದಂತೆ, ಶುಕ್ರವಾರದಂದು ಮಾತ್ರ ಜಾನುವಾರು ಸಂತೆ ನಡೆಯುತ್ತದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ದಾಖಲೆಗಳು (ರಶೀದಿ ಕ್ರಮ ಸಂಖ್ಯೆ: 27653 ಹಾಗೂ 27654 ಗಳನ್ನು) ತಿದ್ದಿ ಸುಳ್ಳು ಸೃಷ್ಟಿಸಿ ಹರಿದಾಡುತ್ತಿರುವುದು ಕಂಡು ಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆರ್.ಟಿ.ಓ ಅಧಿಕಾರಿ ಮತ್ತು ಪಶು ವೈದ್ಯಾಧಿಕಾರಿಯವರಿಂದ ಮಾಹಿತಿ ಪಡೆಯಲಾಗಿ, ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಲು ಅನುಮತಿ ನೀಡಿರುವುದಿಲ್ಲವೆಂದು ತಿಳಿಸಲಾಗಿದೆ.
ಈ ರೀತಿ ಸುಳ್ಳು ದಾಖಲೆ ಸೃಷ್ಟಿಸಿ ಆರೋಪಿಗಳನ್ನು ರಕ್ಷಿಸುವ ದುರುಧ್ಧೇಶದಿಂದ State office SDPI Karnataka ಎಂಬ ಹೆಸರಿನ“X”ಖಾತೆಯ ಖಾತೆದಾರರು, Thejasnews.com ನ ಮಾಲಕ/ಸಂಪಾದಕ ಮತ್ತು ಸಾದತ್ ಬಜತ್ತೂರು ಎಂಬವರು ಹಾಗೂ ಇತರ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವ ಮೂಲಕ, ಸಾರ್ವಜನಿಕರು ಉದ್ವೇಗಗೊಂಡು ಜನರು ಗುಂಪು ಕೂಡಿ ದೊಂಬಿಯಂತಹ ಅಪರಾಧ ನಡೆಸಲು ಸನ್ನಿವೇಶ ಸೃಷ್ಟಿಸಿರುತ್ತಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ 05.11.2025 ರಂದು ಅ.ಕ್ರ: 123-2025, ಕಲಂ: 233,240,338,353(1)(b),192,61(2)(b),238(c),r/w3(5))ಭಾರತೀಯ ನ್ಯಾಯ ಸಂಹಿತೆ 2023,ರಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕೂಡಾ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಪ್ರಚೋದನಾಕಾರಿ ಪೋಸ್ಟ್ ಪ್ರಸಾರ ಮಾಡುವವರ ವಿರುದ್ಧ ಕಠಿನ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು. ಆದ್ದರಿಂದ ಸಾಮಾಜಿಕ ಜಾಲತಾಣ ಬಳಕೆದಾರರು ಜವಾಬ್ದಾರಿಯುತವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಬೇಕಾಗಿ ಸೂಚಿಸಲಾಗಿದೆ.