ಬೆಳ್ತಂಗಡಿ,ಅ. 09(DaijiworldNews/ TA): ಸವಣಾಲು ಗ್ರಾಮದ ಪಲ್ಲದಡಿಯಲ್ಲಿರುವ ಸರಕಾರಿ ಜಾಗದಿಂದ ಮರಗಳನ್ನು ಕಡಿದು ಮಾರಾಟದ ಉದ್ದೇಶದಿಂದ ಸಾಗಿಸುವ ಸಿದ್ಧತೆಯಲ್ಲಿದ್ದ ಸಂದರ್ಭ ವೇಣೂರು ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಮರಮಟ್ಟುಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಸರಕಾರಿ ಜಾಗದಲ್ಲಿದ್ದ 15ರಿಂದ 20 ಅಕೇಶಿಯಾ ಹಾಗೂ ಮ್ಯಾಂಜಿಯಮ್ ಮರಗಳನ್ನು ಕಡಿಯಲಾಗಿದೆ. ಈ ಕುರಿತು ಖಚಿತ ಮಾಹಿತಿಯಂತೆ ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ. ನೇತೃತ್ವದ ತಂಡ ದಾಳಿ ನಡೆಸಿದ್ದು, ಕಡಿದಿರುವ ಒಂದಷ್ಟು ಮರಗಳು ಹಾಗೂ ಸಾಗಿಸಲು ನಿಲ್ಲಿಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯ ನಿವಾಸಿ ಬೆನ್ನಿಪ್ರಸಾದ್ ಯಾವುದೇ ಅನುಮತಿ ಪಡೆಯದೆ ತನ್ನ ಜಾಗದ ಪಕ್ಕದಲ್ಲಿದ್ದ ಸರಕಾರಿ ಜಾಗದಿಂದ ಮರಗಳನ್ನು ಕಡಿದಿದ್ದಾನೆ ಎನ್ನಲಾಗಿದೆ. ಈ ಕುರಿತು ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದ್ದಾರೆ.