ಬಂಟ್ವಾಳ, ಅ. 08 (DaijiworldNews/TA): ಮುರಿದ ಬಾಗಿಲು, ಸ್ವಚ್ಛವಿಲ್ಲದ ಟಾಯ್ಲೆಟ್, ಪಾನ್ ಪರಾಗ್ ತಿಂದು ಉಗುಳಿದ ಗೋಡೆಗಳು, ತುಕ್ಕು ಹಿಡಿದ ಆಡಳಿತ ಯಂತ್ರಗಳು ಒಟ್ಟಾರೆಯಾಗಿ ಜಡತ್ವದ ಚೌಕಟ್ಟಿನಲ್ಲಿರುವ ಬಂಟ್ವಾಳ ಆಡಳಿತ ಸೌಧದ ಕಚೇರಿಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಮೇಲಾಧಿಕಾರಿಗಳು ಒಮ್ಮೆ ಬೇಟಿ ಕೊಡಿ ಎಂಬ ಒತ್ತಾಯಗಳು ಕೇಳಿ ಬಂದಿವೆ. ಇದು ಬಂಟ್ವಾಳದ ಮಿನಿ ವಿಧಾನ ಸೌಧ( ಆಡಳಿತ ಸೌಧ) ಕಚೇರಿಯ ಅವ್ಯವಸ್ಥೆಯಾಗಿದೆ.




ಆಡಳಿತ ಸೌಧದ ಕಚೇರಿಗೆ ಪ್ರವೇಶ ಮಾಡಿದ ನಂತರ ಒಂದನೇ ಮತ್ತು ಎರಡನೇ ಮಹಡಿಗೆ ಮೆಟ್ಟಿಲುಗಳ ಮೇಲೆ ಹತ್ತಿಕೊಂಡು ಹೋಗಬೇಕಾದರೆ ಕೆಂಪು ಬಣ್ಣ ತುಂಬಿದ ಗೋಡೆಗಳು ಸ್ವಾಗತಿಸುತ್ತವೆ. ಪಾನ್ ಪರಾಗ್ ಅಥವಾ ಎಳೆಅಡಿಕೆ ತಿಂದು ಉಗುಳಿದ್ದು ಗೋಡೆಗಳ ಅಂದವನ್ನು ಕೆಡಿಸಿದೆ.
ಇನ್ನು ಇಲ್ಲಿನ ಶೌಚಾಲಯದ ಬಗ್ಗೆ ಕೇಳುವುದೇ ಬೇಡ? ಇಲ್ಲಿನ ಶೌಚಾಲಯದ ಬಾಗಿಲು ಮುರಿದು ಹೋದರೆ, ಇನ್ನು ಬೇಸಿನ್ ತುಂಬಿ ತುಳುಕುತ್ತಿದ್ದು,ಮಾರಣಾಂತಿಕ ಕಾಯಿಲೆಗಳಿಗೆ ಪ್ರೇರಣೆಯಾಗುವಂತಿದೆ. ಶುಚಿತ್ವವಿಲ್ಲದ ಇಲ್ಲಿನ ವ್ಯವಸ್ಥೆಯ ಬಗ್ಗೆ ತಹಶಿಲ್ದಾರ್ ಅವರು ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.