ಬಂಟ್ವಾಳ, ಅ. 03 (DaijiworldNews/AA): ರಸ್ತೆ ದಾಟುವ ವೇಳೆ ರಿಕ್ಷಾ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಅಮ್ಟೂರು ಕ್ರಾಸ್ ನಲ್ಲಿ ನಡೆದಿದೆ.

ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಲೋಕೇಶ್ ಮೂಲ್ಯ (44) ಮೃತ ದುರ್ದೈವಿ.
ಲೋಕೇಶ್ ಅವರು ಕಲ್ಲಡ್ಕದ ನಾಯರ ಪೆಟ್ರೋಲ್ ಪಂಪ್ ನ ಮುಂಭಾಗದಲ್ಲಿ ರಸ್ತೆಯನ್ನು ದಾಟುವ ವೇಳೆ ಅತೀ ವೇಗದಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ಕಳೆದುಕೊಂಡು ಬಳಿಕ ಪಲ್ಟಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲೋಕೇಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ವೇಳೆ ಮೃತಪಟ್ಟ ಬಗ್ಗೆ ಪೋಲಿಸ್ ಇಲಾಖೆ ಮಾಹಿತಿ ನೀಡಿದೆ.
ರಿಕ್ಷಾದಲ್ಲಿ ಚಾಲಕನ ಪತ್ನಿ ಮಕ್ಕಳು ಹಾಗೂ ಮಾವ ಪ್ರಯಾಣಿಸುತ್ತಿದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಲೋಕೇಶ್ ಅವರು ಸುಭಾಷ್ ನಗರದ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಸದಸ್ಯರಾಗಿದ್ದು,ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಎರಡು ಮಕ್ಕಳ ಸಹಿತ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.