ಉಡುಪಿ, ಅ.01 (DaijiworldNews/TA): ಕೆಲವು ದಿನಗಳ ಹಿಂದೆ ಪೆರ್ನಾಲ್ -ಪಿಲಾರುಕಾನದ ಪರಿಸರದ ಸಮಾನ ಮನಸ್ಕ ನಾಗರಿಕರು ಅತ್ರಾಡಿ- ಶಿರ್ವಾ- ಬಜೆ ರಾಜ್ಯ ಹೆದ್ದಾರಿಯ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ, ರಸ್ತೆ ದುರಸ್ತಿ ಕಾರ್ಯ ಮಾಡದ್ದನ್ನು ಖಂಡಿಸಿ, ಪ್ರತಿಭಟನಾಕಾರರು ಜತೆಗೂಡಿ, ರಸ್ತೆ ರಿಪೇರಿ ಮಾಡುವುದರ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಶಿಕ್ಷಕ ಡಾ. ಮೆಲ್ವಿನ್ ಕ್ಯಾಸ್ತಲಿನೊ ಪೆರ್ನಾಲ್ ಮಾತನಾಡಿ, ಕಳೆದ ಬಾರಿ ಪ್ರತಿಭಟನೆ ನಡೆಸಿದ ಒಂದು ದಿನದ ನಂತರ, ಪ್ರತಿಭಟನೆ ನಡೆಸಿದ ಜಾಗದಲ್ಲಿದ್ದ ಗುಂಡಿಗಳನ್ನು ಮಾತ್ರ ಜೆಸಿಬಿ ತಂದು ಸಮತಟ್ಟು ಮಾಡಿದ್ದನ್ನು ಹೊರತು ಪಡಿಸಿ ಸಂಬಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ದೀರ್ಘ ಮೌನಕ್ಕೆ ಮೊರೆ ಹೋಗಿದ್ದಾರೆ. ಜಂತ್ರ ಗುಂಡುಪಾದೆಯಿಂದ ಪಂಜಿಮಾರ್ವರೆಗೆ ರಸ್ತೆ ತೀರಾ ಹದೆಗೆಟ್ಟಿದ್ದು, ಸಂಚಾರಕ್ಕೆ ಆಯೋಗ್ಯವಾಗಿದೆ. ದಿನಾಲೂ ಹತ್ತಾರು ಜನ ಹೊಂಡಗಳಲ್ಲಿ ಬಿದ್ದು ಸಂಕಷ್ಟ ಅನುಭವಿಸುತ್ತಿದ್ದಾರೆ. ನೋವುಂಡವರ ಶಾಪ ಖಂಡಿತ ಇವರಿಗೆ ತಟ್ಟುತ್ತದೆ. ನಮ್ಮ ಹೋರಾಟ ಒಂದು ಆರಂಭ ಅಷ್ಟೇ. ಸಂಬಂಧಪಟ್ಟವರು ಇನ್ನೂ ಕಾರ್ಯಪ್ರವತ್ತರಾಗದಿದ್ದಲ್ಲಿ ಜನರು ದಂಗೆ ಏಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಡಿಜೆ ಸುಜಯ್ ಪೆರ್ನಾಲ್ ಮಾತನಾಡಿ, ಮತ ಕೇಳಲು ಬರುವ ಜನಪ್ರತಿನಿಧಿಗಳು ಈಗ ಯಾಕೆ ಬರುತ್ತಿಲ್ಲ? ನಿಮ್ಮಿಂದ ಈ ರಸ್ತೆಯನ್ನು ದುರಸ್ತಿಗೊಳಿಸಲು ಆಗದಿದ್ದರೆ ನಮಗೆ ಲಿಖಿತ ರೂಪದಲ್ಲಿ ಕೊಡಿ. ನಾವು ಇವತ್ತು ಸಾಂಕೇತಿಕವಾಗಿ ಜನರಿಂದ ಚಂದಾ ಎತ್ತಿ, ಸಿಮೆಂಟ್-ಮರಳು ತಂದು ರೆಡಿ-ಮಿಕ್ಸ್ ಇಲ್ಲಿ ತಯಾರಿಸಿ ಒಂದೆರಡು ಗುಂಡಿಗಳನ್ನು ಮುಚ್ಚಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮಿಂದ ಆಗದಿದ್ದರೆ, ನಾವೇ ರಸ್ತೆ ಗುಂಡಿಗಳನ್ನು ಮುಚ್ಚಿಸುತ್ತೇವೆ’ ಎಂದರು. ಸ್ಥಳೀಯ ಸ್ತ್ರೀ ಸಂಘಟನೆಯವರೂ ಪ್ರತಿಭಟನೆಯಲ್ಲಿ ಸಾಥ್ ನೀಡಿದ್ದರು. ಪ್ರತಿಭಟನೆಯಲ್ಲಿ ಒಸ್ವಾಲ್ಡ್ ಲೋಬೊ, ವಿಲ್ಫ್ರೆಡ್ ಕ್ಯಾಸ್ತಲಿನೋ, ವ್ಯಾಲೆಂಟೈನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.