ಸುಳ್ಯ, ಸೆ.20(DaijiworldNews/TA): ತಾಲೂಕಿನ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೆರ್ಪೆಯಲ್ಲಿ ಅಸಮರ್ಪಕವಾಗಿ ನಡೆಯುತ್ತಿರುವ ನಗರ ಪಂಚಾಯತಿ ಕಸ ವಿಲೇವಾರಿ ಘಟಕದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕಲ್ಚೆರ್ಪೆ ಭಾಗದ ಜನರು ಒತ್ತಾಯಿಸಿದ್ದಾರೆ.

ಒಂದು ವೇಳೆ ತಪ್ಪಿದಲ್ಲಿ ಸುಳ್ಯ ನಗರ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಸ್ಥಳೀಯರು ಎಚ್ಚರಿ ನೀಡಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಶಾಸಕರ ಮತ್ತು ನಗರ ಪಂಚಾಯತ್ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಸ್ಥಳೀಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ ಪ್ರಕಾರ ಕಸವನ್ನು ಶೇಖರಣೆ ಮಾಡದೆ ದಿನದ ಕಸವನ್ನು ಅದೇ ದಿನ ಬರ್ನಿಂಗ್ ಮಾಡಿ ಮುಗಿಸುವುದೆಂದು ನಿರ್ಣಯಿಸಿ ಕಲ್ಚೆರ್ಪೆ ಭಾಗದ ಜನರಿಗೆ ಭರವಸೆ ನೀಡಲಾಗಿತ್ರು.
ಆದರೆ ಬರ್ನಿಂಗ್ ಮಿಷನ್ ಕೆಟ್ಟು ನಿಂತಿದೆ. ಎರೆಹುಳ ಗೊಬ್ಬರ ತುಟ್ಟಿಯ ಘಟದಲ್ಲಿ ಶೇಖರಣೆ ಮಾಡಿ ಶೆಡ್ ನಲ್ಲಿ ಕಸದ ರಾಶಿ ತುಂಬಿ ತುಳುಕಿದೆ. ಇಂಗು ಗುಂಡಿ ನಿರ್ಮಿಸದೆ ಕೊಳಚೆ ನೀರನ್ನು ಸಾರ್ವಜನಿಕ ರಸ್ತೆಗೆ ಬಿಡುತ್ತಿದ್ದು ಪರಿಸರವೆಲ್ಲ ದುರ್ನಾತ ಬೀರುತ್ತಿದೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಸುಳ್ಯ ನಗರ ಪಂಚಾಯತ್ ಗೆ ಮುತ್ತಿಗೆ ಹಾಕಲು ಸ್ಥಳೀಯರು ನಿರ್ಧರಿಸಿದ್ದಾರೆ.