ಉಡುಪಿ, ಸೆ. 08(DaijiworldNews/TA): ಕ್ರೈಸ್ತ ಬಾಂಧವರ ತೆನೆ ಹಬ್ಬ ಮೊಂತಿ ಫೆಸ್ತ್ ಹಿನ್ನೆಲೆಯಲ್ಲಿ ಸ್ಥಳೀಯ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಭಾನುವಾರ ತರಕಾರಿ ಸಂತೆಯನ್ನು ಆಯೋಜಿಸಲಾಗಿತ್ತು. ರೈತರು ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳನ್ನು ತಂದು ಮಾರಾಟ ಮಾಡಲು 'ಸಾವಯವ ತರಕಾರಿ ಸಂತೆ' ಆಯೋಜಿಸಲಾಗಿತ್ತು.


ತೊಟ್ಟಂ, ತೆಂಕನಿಡಿಯೂರು, ಬಡಾನಿಡಿಯೂರು, ಮಲ್ಪೆ ಭಾಗದ ರೈತರು ಸಾವಯವ ಗೊಬ್ಬರದಿಂದ ಬೆಳೆದ ಬೆಂಡೆಕಾಯಿ, ಹೀರೆ, ಹರಿವೆ, ಅಲಸಂದೆ, ಬಸಳೆ, ಇತರ ತರಕಾರಿಗಳನ್ನು ತಂದು ಮಾರಾಟಕ್ಕಿಟ್ಟಿದ್ದರು. ತರಕಾರಿ ಸಂತೆಗೆ ಹಲವರು ಭೇಟಿ ನೀಡಿ, ಶುದ್ಧ, ಸಾವಯವ ತರಕಾರಿ ಖರೀದಿಸಿದರು. ಯಾವುದೇ ಮಧ್ಯವರ್ತಿಗಳು, ದಲ್ಲಾಳಿಗಳ ಕಿರಿಕಿರಿ ಇಲ್ಲದೇ, ರೈತರು ನೇರವಾಗಿ ತಮ್ಮ ತೋಟದಲ್ಲಿನ ತರಕಾರಿಗಳನ್ನು ಮಾರಿದರು. ಈ ವೇಳೆ ಮಾತನಾಡಿದ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ, ತರಕಾರಿಯನ್ನು ಬೆಳೆಸಿದವರಿಗೆ ಮಧ್ಯವರ್ತಿಗಳ ಹಾವಳಿಯಿಂದಾಗಿ ಉತ್ತಮ ಬೆಲೆ ಲಭಿಸಬೇಕೆಂಬ ಸದುದ್ದೇಶದೊಂದಿಗೆ ಪ್ರತಿಯೊಬ್ಬರು ರಾಸಾಯನಿಕ ಮಿಶ್ರಿತ ಆಹಾರವನ್ನು ಮರೆತು ಸಾವಯವ ಗೊಬ್ಬರದಿಂದ ತಯಾರಿಸಿದ ತರಕಾರಿಯನ್ನು ಪಡೆಯುವ ನಿಟ್ಟಿನಲ್ಲಿ ಆಯೋಜಿಸಿರುವ ತರಕಾರಿ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ತೊಟ್ಟಂ ದೇವಾಲಯದ ಶ್ರೀ ಸಾಮಾನ್ಯರ ಆಯೋಗ, ಕಥೊಲಿಕ್ ಸಭಾ ಸಂಘಟನೆಯ ವಿಶಿಷ್ಟ ಪ್ರಯತ್ನ ಯಶಸ್ವಿಯಾಯಿತು. ಸ್ಥಳೀಯ ಸರ್ವಧರ್ಮ ಸಮನ್ವಯ ಸಮಿತಿಯೂ ಕೂಡ ಇದಕ್ಕೆ ಕೈಜೋಡಿಸಿತ್ತು. ಸ್ಥಳೀಯ ಕಲ್ಮಾಡಿ, ಕೆಮ್ಮಣ್ಣು, ಕಲ್ಯಾಣಪುರ ಭಾಗದ ಕ್ರೈಸ್ತ ಬಾಂಧವರು ತರಕಾರಿ ಸಂತೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಅಲ್ಲದೆ, ತರಕಾರಿಗಳನ್ನು ಕೊಂಡೊಯ್ಯಲು ಕಡ್ಡಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ತರಲು ಸೂಚಿಸಿರುವುದು ಮತ್ತೊಂದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ ಕಥೊಲಿಕ್ ಸಭಾ ಅಧ್ಯಕ್ಷರಾದ ವೀಣಾ ಫೆರ್ನಾಂಡಿಸ್, ಸರ್ವ ಧರ್ಮಸಮನ್ವಯ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ, ಪದಾಧಿಕಾರಿಗಳಾದ ರಾಮಪ್ಪ ಸಾಲಿಯಾನ್, ಶಬೀರ್ ಸಾಹೇಬ್, ಸೀರಾಝ್ ಮಲ್ಪೆ ಉಪಸ್ಥಿತರಿದ್ದರು.