ಪುತ್ತೂರು, ಆ. 26 (DaijiworldNews/AA): ಖೋಟಾನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಆ. 25ರಂದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಟ್ವಾಳದ ಬಿ.ಸಿ ರೋಡ್, ಜೋಡು ಮಾರ್ಗ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ನಿಜಾಮ್ (33) ಬಂಧಿತ ಆರೋಪಿ.
ಆರೋಪಿಯ ವಿರುದ್ಧ 2023 ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 01/2023 ಕಲಂ 489 (ಬಿ) ಮತ್ತು (ಸಿ) ಜೊತೆಗೆ 34 ಭಾ.ದಂ.ಸಂ. ರಂತೆ ಪ್ರಕರಣ ದಾಖಲಾಗಿ ನ್ಯಾಯಲಯದಲ್ಲಿ ವಿಚಾರಣೆಯಲ್ಲಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ. ನಂತರ ಪ್ರಕರಣದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಈತನ ಮೇಲೆ 8 ಬಾರಿ ಬಂಧನ ವಾರಂಟ್ ಹೊರಡಿಸಿರುತ್ತದೆ.
ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ವಾರಂಟ್ ಜಾರಿ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಬಳಿಯ ವಲಾಲು ಎಂಬಲ್ಲಿ ಈತನನ್ನು ಆ. 25ರಂದು ದಸ್ತಗಿರಿ ಮಾಡಿದ್ದಾರೆ. ಆರೋಪಿಯು ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಮೇರೆಗೆ ಆತನ ವಿರುದ್ಧ ಕಲಂ: 269 BNS-2023 ಪ್ರಕಾರ ಕ್ರಮ ಕೈಗೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನು ಈ ಹಿಂದೆ ಆರೋಪಿಯ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಮಡಿವಾಳ ಪೊಲೀಸ್ ಠಾಣೆ, ಕುಶಾಲ ನಗರ ಗ್ರಾಮಾಂತರ ಪೊಲೀಸ್ ಠಾಣೆ, ಮಂಗಳೂರು ಬರ್ಕೆ ಪೊಲೀಸ್ ಠಾಣೆ, ಪುತ್ತೂರು ನಗರ ಪೊಲೀಸ್ ಠಾಣೆ ಹಾಗೂ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣಾ ಹಂತದಲ್ಲಿವೆ.