ಮಂಗಳೂರು,ಆ. 22 (DaijiworldNews/AK): ಸ್ನೇಹಿತರ ಜೊತೆ ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾಗಿದ್ದಳು ಎಂದು ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದ ಸುಜಾತಾ ಭಟ್ ವಿಚಾರದಲ್ಲಿ ಒಂದೊಂದೇ ಸತ್ಯಗಳು ಹೊರ ಬರುತ್ತಿವೆ.

ತಮ್ಮ ಮಗಳು ಅಂತ ಸುಜಾತಾ ಭಟ್ ಫೋಟೋ ರಿಲೀಸ್ ಮಾಡುತ್ತಿದ್ದಂತೆ ಸಾಕಷ್ಟು ಊಹಾಪೋಹಾಗಳು ಎದ್ದಿದೆ. ಯಾರದ್ದೋ ಮನೆಯ ಸೊಸೆ ಫೋಟೋ ತೋರಿಸಿ ತಮ್ಮ ಮಗಳು ಎನ್ನುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ವಸಂತಾ ಎಂಬುವವರ ಸಹೋದರ ನನ್ನ ತಂಗಿ ಫೋಟೋ ಬಳಸಿಕೊಂಡಿದ್ದಾರೆ ಅಂತ ಆರೋಪ ಮಾಡಿದ್ದರು. ಇದೀಗ ಅನನ್ಯಾ ಭಟ್ ಅವರ ಪೂರ್ವಾಪರ ತಿಳಿದುಕೊಳ್ಳಲು ಎಸ್ಐಟಿ ತಂಡ ಮುಂದಾಗಿದ್ದು, ಈ ಬೆನ್ನಲ್ಲೇ ಸುಜಾತಾ ಭಟ್ಗೆ ನೋಟಿಸ್ ನೀಡಿದೆ.
ಬೆಳ್ತಂಗಡಿ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ಸುಜಾತಾ ಭಟ್ ಅವರಿಗೆ ನೋಟಿಸ್ ನೀಡಿದೆ. ಬೆಳ್ತಂಗಡಿ ಕಚೇರಿ ಸಿಬ್ಬಂದಿ ಬೆಂಗಳೂರಿಗೆ ಬಂದು ನೋಟಿಸ್ ಜಾರಿಮಾಡಿದ್ದಾರೆ. ನೋಟೀಸ್ ಸ್ವೀಕರಿಸಿ ಶೀಘ್ರದಲ್ಲೇ ವಿಚಾರಣೆಗೆ ಬರೋದಾಗಿ ಸುಜಾತ ಭಟ್ ತಿಳಿಸಿದ್ದಾರೆ.
ಅನನ್ಯಾ ಭಟ್ ನಾಪತ್ತೆ ಆಗಿದ್ದಾರೆ ಅನ್ನೋ ವಿಚಾರದಲ್ಲಿ ಇದೀಗ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಅನನ್ಯಾ ಭಟ್ ಅಸ್ತಿತ್ವದ ಬಗ್ಗೆ ಎಸ್ಐಟಿ ಅಧಿಕಾರಿಗಳು ಶಿವಮೊಗ್ಗ, ಬೆಂಗಳೂರು, ಉಡುಪಿಯಲ್ಲಿ ದಾಖಲೆ ಸಂಗ್ರಹಿಸಿದೆ ಎಂದು ವರದಿಯಾಗಿದೆ.