ಬಂಟ್ವಾಳ, ಆ. 15 (DaijiworldNews/AK): ಸಂವಿಧಾನದ ರಕ್ಷಣೆ ಕುರಿತು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸುವಂತೆ ಕೆ.ಪಿ.ಸಿ.ಸಿ.ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಾಗೃತಿ ಕಾರ್ಯಕ್ರಮ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಿ.ಸಿ.ರೋಡಿನಲ್ಲಿ ನಡೆಯಿತು.

ಇದೇ ಸಂದರ್ಭ ಮಾತನಾಡಿದಮಾಜಿಸಚಿವ ಬಿ.ರಮಾನಾಥ ರೈಯವರು, ರಾಹುಲ್ಗಾಂಧಿಯವರು ಮತಕಳ್ಳತನದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ತನ್ನ ಬೆಂಬಲವಿದೆ ಎಂದರು.
ಚುನಾವಣಾ ಇಲಾಖೆಯ ವೈಫಲ್ಯದ ಬಗ್ಗೆ ಮಾತನಾಡಿದರೆ, ಅದಕ್ಕೆ ಆ ಇಲಾಖೆಯೇ ಉತ್ತರ ನೀಡಬೇಕಾದ್ದು ನಿಯಮ. ಆದರೆ ಇದಕ್ಕೆ ಬಿಜೆಪಿ ಯಾಕೆ ಉತ್ತರ ನೀಡುವ ಕಾರ್ಯಕ್ಕೆ ಮುಂದಾಗಿದೆ ಎಂದು ಪ್ರಶ್ನಿಸಿದ ಅವರು, ಹಾಗಾದರೆ ಬಿಜೆಪಿಯವರು ಮತಕಳ್ಳರಾ? ಎಂದರು.
ಮತಗಳ್ಳತನದ ಪ್ರಕರಣಗಳಿಂದಾಗಿ ಅರ್ಹ ಮತದಾರರಿಗೆ ಅನ್ಯಾಯವಾಗುತ್ತಿದ್ದು, ಪಾರದರ್ಶಕವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಕಾರ್ಯ ಆಗಬೇಕು ಎಂದು ಅವರು ಒತ್ತಾಯಿಸಿದರು.