ಕಾಸರಗೋಡು, ಆ. 05 (DaijiworldNews/TA): ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಿಪಿಐ ಪಕ್ಷದ ಮುಖಂಡರಾಗಿದ್ದ ಎಂ. ನಾರಾಯಣನ್ (72) ಮಂಗಳವಾರ ಸಂಜೆ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು. ಹಳದಿ ಕಾಮಾಲೆ ಬಾಧಿತರಾಗಿ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

1956ರ ಜುಲೈ1ರಂದು ಜನಿಸಿದ್ದ ಅವರು 2001ರಿಂದ 2011ರತನಕ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದ ಕಾಸರಗೋಡು ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಗೊಂಡ ಅಪರೂಪದ ಹಿಂದುಳಿದ ಪರಿಶಿಷ್ಟ ವರ್ಗದ ನಾಯಕರುರಾಗಿದ್ದರು.
ಉದ್ಯೋಗಕ್ಕೆ ರಾಜೀನಾಮೆ ನೀಡಿ ಎಡಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾಗಿದ್ದರು. 2014ರಿಂದ 2019ರ ತನಕ ಕಾಸರಗೋಡು ಜಿಲ್ಲಾ ಪಂಚಾಯತ್ ನ ಬೇಡಡ್ಕ ಡಿವಿಜನ್ ಸದಸ್ಯ, ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ, ಕಾಞಂಗಾಡು ಮಂಡಲ ಕಾರ್ಯದರ್ಶಿ, ಕರ್ಷಕ ತೊಯಿಲಾಳಿ ಫೆಡರೇಷನ್ ಕೇರಳ ರಾಜ್ಯ ಕಾರ್ಯದರ್ಶಿ, ಆದಿವಾಸಿ ಮಹಾಸಭಾ ರಾಜ್ಯದ ಕಾರ್ಯದರ್ಶಿಯಾಗಿ ದುಡಿದಿದ್ದರು.