ಮಂಗಳೂರು, ಜು. 31 (DaijiworldNews/AA): ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪ್ರತ್ಯೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಎಲ್.ಪಿ.ಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಹೊಯಿಗೆ ಬಜಾರ್ ನಿವಾಸಿ ಪಿ.ದಾಮೋದರ ಹಾಗೂ ಮಂಗಳೂರು ಲಿಟಲ್ ಫ್ಲವರ್ ಅಪಾರ್ಟ್ಮೆಂಟ್ ಕಂಕನಾಡಿ ನಿವಾಸಿ ಉಬೇದುಲ್ಲಾ ಬಂಧಿತ ಆರೋಪಿಗಳು.
ಬಂಧಿತ ಆರೋಪಿ ಪಿ.ದಾಮೋದರ ಎಂಬಾತನು 14 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. 2011ನೇ ಸಾಲಿನಲ್ಲಿ ದಾಖಲಾದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 4ನೇ ಆರೋಪಿಯಾದ ಈತನ ವಿರುದ್ಧ ನ್ಯಾಯಾಲಯವು ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು.
ಆರೋಪಿ ಉಬೇದುಲ್ಲಾ ಎಂಬಾತನನ್ನು ಕಣ್ಣೂರು ಅಂತರ್ ರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಬಂಧಿಸಲಾಗಿದೆ. ಈತನ ವಿರುದ್ಧ 2018 ನೇ ಸಾಲಿನಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ಪ್ರಕರಣ-1
2011ರ ಮಾರ್ಚ್ 14ರಂದು ಮಂಗಳೂರು ನಗರದ ಹಂಪನ ಕಟ್ಟೆಯಲ್ಲಿರುವ ಧನ್ಯವಾದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸಿಕೊಂಡಿರುವ ಬಗ್ಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡದ್ದನ್ನು ಪತ್ತೆಹಚ್ಚಲಾಗಿತ್ತು. ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣಾ ಅ.ಕ್ರ 04/2011 ಕಲಂ 3(2)(ಎ) 5(ಡಿ), 2, 7 ಐ.ಟಿ.ಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ತನಿಖಾಧಿಕಾರಿಯವರು ತನಿಖೆಯನ್ನು ನಡೆಸಿ ಪ್ರಕರಣದಲ್ಲಿ 4 ಜನ ಆರೋಪಿತರ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಬಳಿಕ 1 ರಿಂದ ೩ ನೇ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು.
ಆದರೆ ಪ್ರಕರಣ 4 ನೇ ಆರೋಪಿಯಾದ ಪಿ.ದಾಮೋದರ್ ಎಂಬಾತನು ತಲೆಮರೆಸಿಕೊಂಡಿರುವುದರಿAದ ನ್ಯಾಯಾಲಯವು ಈತನ ವಿರುದ್ಧ ಎಲ್.ಪಿ.ಸಿ ವಾರಂಟ್ ಹೊರಡಿಸಿರುತ್ತದೆ. ನಗರದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಇರುವ ವಾರಂಟ್ ಅಸಾಮಿಗಳು ಹಾಗೂ ಎಲ್.ಪಿ.ಸಿ ವಾರಂಟು ಅಸಾಮಿಗಳ ಪತ್ತೆಯ ಬಗ್ಗೆ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಬಾಲಕೃಷ್ಣ, ಪಿ.ಐ ಮತ್ತು ಸಿಬ್ಬಂದಿಗಳು ಸುಮಾರು 14 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಪಿ.ದಾಮೋದರನನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.
ಪ್ರಕರಣ-2
2018 ನೇ ಸಾಲಿನಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ವರದಕ್ಷಿಣಿ ಕಿರುಕುಳ ಪ್ರಕರಣದಲ್ಲಿ ಆರೋಪಿ ಉಬೇದುಲ್ಲಾ ಎಂಬಾತನು ತನ್ನ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಆರೋಪಿಯು ಮದುವೆಯ ಸಮಯಲ್ಲಿ ನೀಡಿದ ಚಿನ್ನಭಾರಣಗಳನ್ನು ತೆಗೆದುಕೊಂಡು ಹೋಗಿ ಮಾರಿ ನಂತರ ವಿದೇಶಕ್ಕೆ ಹೋಗಿ ಯಾವುದೇ ಫೋನ್ ಕರೆ ಮಾಡದೆ ಇದ್ದು, ಅಲ್ಲದೆ ದೂರುದಾರರ ಫೋನ್ ಕರೆಗೂ ಸ್ಪಂದಿಸದೆ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ಮಾಡಿರುವ ಬಗ್ಗೆ 2018ರ ನ. 3 ರಂದು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ 54/2018 ಕಲಂ 498(ಎ), 504 ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿ ಉಬೇದುಲ್ಲಾ ಎಂಬಾತನ ವಿರುದ್ಧ ನ್ಯಾಯಾಲಯಕ್ಕೆ ತಲೆಮರೆಸಿಕೊಂಡಿರುವ ಬಗ್ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ಆರೋಪಿಯ ವಿರುದ್ಧ ಎಲ್.ಪಿ.ಸಿ ವಾರಂಟನ್ನು ಹೊರಡಿಸಲಾಗಿತ್ತು. ಆರೋಪಿಯು ಸುಮಾರು 7 ವರ್ಷಗಳ ಕಾಲ ತಲೆಮರೆಸಿಕೊಂಡಿರುತ್ತದೆ. ಇದೀಗ ಜುಲೈ 29ರಂದು ಆರೋಪಿಯು ಕೇರಳದ ಕಣ್ಣೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬರುತ್ತಿರುವುದಾಗಿ ಮಾಹಿತಿ ದೊರೆತಿತ್ತು. ಆ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.