ಮಂಗಳೂರು, ಜು. 28 (DaijiworldNews/AA): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ವಿವಿಧ ಕೊಂಕಣಿ ಸಂಘಟನೆಗಳ ಸಹಕಾರದಲ್ಲಿ ಇತ್ತೀಚೆಗೆ ನಿಧನರಾದ ಕೊಂಕಣಿ ಸಾಹಿತಿ ಗ್ಲಾಡಿಸ್ ರೇಗೋ ಇವರಿಗೆ ಶೃದ್ಧಾಂಜಲಿ ಸಭೆಯನ್ನು ಜುಲೈ 26ರಂದು ನಗರದ ಸಂದೇಶ ಸಭಾಂಗಣದಲ್ಲಿ ನಡೆಸಲಾಯಿತು.





















ಸಂದೇಶ ಫೌಂಡೇಶನ್, ಮಾಂಡ್ ಸೊಭಾಣ್, ಕೊಂಕಣಿ ಲೇಖಕ, ಕರ್ನಾಟಕ, ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಘ, ದಾಯ್ಜಿ ದುಬಾಯ್ ಮಂಗಳೂರು ಘಟಕ, ಕೊಂಕಣಿ ಭಾಷಾ ಮಂಡಳಿ ಕರ್ನಾಟಕ ಇದರ ಪದಾಧಿಕಾರಿಗಳು ಗ್ಲಾಡಿಸ್ ರೇಗೋ ಅವರಿಗೆ ನಮನ ಸಲ್ಲಿಸಿದರು.
ಸ್ವಾಗತಿಸಿ ಪ್ರಸ್ತಾವನೆಗೈದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರು ಗ್ಲಾಡಿಸ್ ರೇಗೋ ಕೊಂಕಣಿಯ ವೀರ ಮಹಿಳೆಯಂತಿದ್ದರು. ಕೊಂಕಣಿ ಪುಸ್ತಕ ಪ್ರಕಾಶನ, ಸಾಹಿತ್ಯ ರಚನೆ, ಸಂಶೋಧನೆ, ಜನಪದ, ಕತೆ, ಕವಿತೆ, ಕಾದಂಬರಿ ಹೀಗೆ ಎಲ್ಲಾ ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಸ್ಪೂರ್ತಿಯ ಸೆಲೆಯಾಗಿದ್ದವರು. ಅವರ ಕೆಲಸ ಕಾರ್ಯಗಳ ಪ್ರೇರಣೆಯಿಂದ ನಮ್ಮ ಕೆಲಸ ಮುಂದುವರಿಸೋಣ ಎಂದು ಹೇಳಿದರು.
ಹಿರಿಯ ಲೇಖಕರನ್ನು ಅವರು ಜೀವಂತವಿರುವಾಗ ಗೌರವಿಸಬೇಕು. ಈ ಪರಿಪಾಟವನ್ನು ಅಕಾಡೆಮಿ ಆರಂಭಿಸಿದೆ. ವಯಸ್ಸು ಹಾಗೂ ಅನಾರೋಗ್ಯದ ನಿಮಿತ್ತ ಮನೆಯಲ್ಲೇ ಇರುವ ಸಾಹಿತಿಗಳನ್ನು ಅವರ ಮನೆಗೆ ಹೋಗಿ ಸನ್ಮಾನಿಸಿ, ಕುಶಲೋಪರಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡದ ಹಿರಿಯ ಲೇಖಕಿ ಬಿ ಎಂ ರೋಹಿಣಿ ಹಾಗೂ ಕೊಂಕಣಿ ಲೇಖಕರಾದ ರೋನಿ ಅರುಣ್, ಡಾಲ್ಫಿ ಲೋಬೊ, ಹೇಮಾಚಾರ್ಯ, ಪಿಂಟೋ ವಾಮಂಜೂರು, ರೇಮಂಡ್ ಡಿಕುನ್ಹಾ, ಆಂಡ್ರ್ಯೂ ಎಲ್ ಡಿಕುನ್ಹಾ, ಸ್ಟೀವನ್ ಕ್ವಾಡ್ರಸ್ ಅವರು ಗ್ಲಾಡಿಸ್ ರೇಗೋ ಅವರಿಗೆ ನುಡಿನಮನ ಸಲ್ಲಿಸಿದರು.
ಅಕಾಡೆಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ಸಪ್ನಾ ಕ್ರಾಸ್ತಾ ಹಾಗೂ ಸಾಹಿತಿ ಲೇಖಕರು ಉಪಸ್ಥಿತರಿದ್ದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.