ಬೆಳ್ತಂಗಡಿ, ಜು. 15(DaijiworldNews/TA): ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಜೋಸ್ಸಿ ಅಲ್ವಿನ್ ಲೋಬೋ ಅವರ ಮನೆಗೆ ತಡರಾತ್ರಿ ದಾಳಿ ಮಾಡಿದ ಬೆಳ್ತಂಗಡಿ ಅರಣ್ಯ ಇಲಾಖೆಯ ಸಿಬಂದಿ ಯಾವುದೋ ಕಾಡು ಪ್ರಾಣಿಯ 17 ಕೆಜಿ ಮಾಂಸ ಮತ್ತು ಬೇಟೆಗೆ ಬಳಸಿದ ಕೋವಿ ಇತ್ಯಾದಿ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಡು ಪ್ರಾಣಿಯನ್ನು ಬೇಟೆಯಾಡಿ ಮಾಂಸ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕಾರಿನಲ್ಲಿಟ್ಟು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇಲಾಖೆಯ ಸಿಬಂದಿ ದಾಳಿ ನಡೆಸಿದ್ದರು. ಕುಲಾಯಿ ಮೇಗಿನ ಮನೆ ನಿವಾಸಿ ಶರತ್ ಶೆಟ್ಟಿಗೆ ಸೇರಿದ ರಕ್ತದ ಕಲೆಗಳಿದ್ದ ಬಿಳಿ ಬಣ್ಣದ ಕಾರು, ಒಂದು ಸಿಂಗಲ್ ಬ್ಯಾರಲ್ ಕೋವಿ, ಮೂರು ಕಾಟ್ರಿಜ್, ಒಂದು ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಯಾವ ಪ್ರಾಣಿಯ ಮಾಂಸ ಎಂದು ತಿಳಿಯಲು ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಆರೋಪಿಗಳಾದ ಜೋಸ್ಸಿ ಅಲ್ವಿನ್ ಲೋಬೋ ಮತ್ತು ಶರತ್ ಶೆಟ್ಟಿ ವಿರುದ್ಧ ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಟಿ.ಎನ್., ಡಿಆರ್ಎಫ್ಒ ಸಂದೀಪ್, ರಾಘವೇಂದ್ರ, ಕಿರಣ್ ಪಾಟೀಲ್, ಕಮಲಾ, ಬೀಟ್ ಫಾರೆಸ್ಟರ್ ಪರಶುರಾಮ ಮೇಟಿ, ಚಾಲಕ ದಿವಾಕರ ತಂಡದಲ್ಲಿದ್ದರು. ಈ ಕುಖ್ಯಾತ ಕಾಡುಪ್ರಾಣಿ ಬೇಟೆ ತಂಡದಲ್ಲಿ ಬೆಳ್ತಂಗಡಿ ತಾಲೂಕಿನ 20 ಮಂದಿಗೂ ಅಧಿಕ ಸದಸ್ಯರಿದ್ದು, ಅವರಲ್ಲಿ ಪರವಾನಿಗೆ ಇರುವ ಮತ್ತು ಅಕ್ರಮ ಕೋವಿ ಹೊಂದಿದವರು ಸದಸ್ಯರಾಗಿದ್ದಾರೆ. ಈ ಒಂದು ತಿಂಗಳಲ್ಲಿ 30 ಕಾಡುಪ್ರಾಣಿಗಳನ್ನು ಬೇಟೆಯಾಡಿದ್ದಾರೆ ಎಂದು ಈ ಬೇಟೆಗಾರರ ಸದಸ್ಯರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಗಲು ಹೊತ್ತಲ್ಲೇ ಹೆಚ್ಚಾಗಿ ಬೇಟೆಯಲ್ಲಿ ನಿರತರಾಗುತ್ತಿದ್ದರು. ಬಳಿಕ ಜೋಸ್ಸಿ ಅಲ್ವಿನ್ ಲೋಬೋ ಮನೆಯ ಶೆಡ್ನಲ್ಲಿ ಮಾಂಸ ಮಾಡಿ ಬೇಕಾದವರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.