ಕಾರ್ಕಳ, ಜು. 05 (DaijiworldNews/AA): ಸಹಕಾರಿ ಕ್ಷೇತ್ರವನ್ನು ಮಹತ್ವಕಾಂಕ್ಷೆ ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸ್ವಸಹಾಯ ಗುಂಪುಗಳು, ಮಹಿಳಾ ಸ್ವಾವಲಂಬನೆ, ಬಡಜನರಿಗೆ ಸಾಲ ಸೌಲಭ್ಯಗಳ ಸರಳಿಕರಣ, ಸ್ವಸಹಾಯ ಸಂಘಗಳ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಹಿರಿಯ ಸಹಕಾರಿ ದುರೀಣ, ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರು ಪತ್ರಕರ್ತರೊಂದಿಗೆ ಕಾರ್ಕಳದ ದಾನಶಾಲೆ ಬಾಹುಬಲಿ ಪ್ರವಚನ ಮಂದಿರದಲ್ಲಿ ಸಂವಾದ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಕೇಂದ್ರ ಸರಕಾರ ಗ್ರಾಮೀಣ ಮಟ್ಟದಲ್ಲಿರುವ ಸಹಕಾರಿ ಬ್ಯಾಂಕ್ ಗಳಿಗೆ ಸರಕಾರಿ ಸಾಲ ಸವಲತ್ತುಗಳನ್ನು ನೀಡುವ ಜವಾಬ್ದಾರಿ ವಹಿಸಿದ್ದಲ್ಲಿ ಸೂಕ್ತ ಹಾಗೂ ಸಮರ್ಪಕವಾಗಿ ನಿರ್ವಹಿಸುಬಹುದಾಗಿದೆ. ಇದರಿಂದಾಗಿ ಸರಕಾರಿ ಸಾಲ ಸವಲತ್ತುಗಳು ಗ್ರಾಮದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸಿಗುವಂತಾಗಲಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಲ ಪಡೆದು ಕೊಂಡಿರುವ ಬಡ ವರ್ಗದ ಜನತೆ ನಿಷ್ಠಾವಂತರಾಗಿ ಶೇ. 100 ಸಾಲ ಮರು ಪಾವತಿ ಮಾಡುವುದರಿಂದ ಸಹಕಾರಿ ಕ್ಷೇತ್ರ ಪ್ರಗತಿಯತ್ತ ಸಾಗಲು ಕಾರಣವಾಗಿದೆ" ಎಂದರು.
"ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿ ಕೊಂಡಿರುವುದರಿಂದ ಇಂದು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಿದೆ. ಹೊರ ಜಿಲ್ಲೆಗಳ ಸಣ್ಣ ಹಾಗೂ ಭಾರಿ ಉದ್ಯಮಗಳಿಗೆ, ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುತ್ತಿದ್ದು, ಸಹಕಾರಿ ಬ್ಯಾಂಕ್ ಗಳು ರಾಷ್ಟ್ರೀಕ್ರತ ಬ್ಯಾಂಕ್ ಗಳಂತೆ ಉದ್ಯಮ, ಕೈಗಾರಿಕೆಗಳಿಗೂ ಸಾಲ ನೀಡುವ ಮಟ್ಟಕ್ಕೆ ಬೆಳೆಯುವಂತಾಗಿದೆ" ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಸಿ ಡಿ ಸಿ ಬ್ಯಾಂಕ್ ನಿರ್ದೇಶಕರಾದ ಇರ್ವತೂರ್ ಭಾಸ್ಕರ್ ಕೋಟ್ಯಾನ್, ಶಶಿಕುಮಾರ್ ರೈ, ನವೋದಯ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರಾದ ಮೇಘರಾಜ್ ಜೈನ್, ಕಾರ್ಕಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.