ಮಂಗಳೂರು, ಜೂ. 25 (DaijiworldNews/AA): "ರಾಜ್ಯ ಸರ್ಕಾರ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಅನ್ನೋದು ಸತ್ಯ" ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ವರ್ಷದ ಬಜೆಟ್ ನಲ್ಲಿ ಒಂದು ಲಕ್ಷದ ಹದಿನಾರು ಸಾವಿರ ಕೋಟಿ ಅಂದಾಜು ಸಾಲ ಇದೆ. ಒಂದು ವೇಳೆ ಖಜಾನೆ ತುಂಬಿ ತುಳುಕಿದ್ರೆ ಬೆಲೆ ಏರಿಕೆ ಯಾಕೆ ಮಾಡ್ತಿದ್ರು? ಖಜಾನೆ ತುಂಬಿ ತುಳುಕಿದ್ರೆ ಸಾಲ ಯಾಕೆ ಮಾಡ್ತಿದ್ರು?" ಎಂದು ಪ್ರಶ್ನಿಸಿದ್ದಾರೆ.
"ಶಾಸಕ ರಾಜುಕಾಗೆ ಹೇಳಿದ ಹಾಗೆ ಅಭಿವೃದ್ಧಿ ಆಗುತ್ತಿಲ್ಲ ಅನ್ನೋದು ಸ್ಪಷ್ಟವಾಗಿದೆ. ಎರಡು ವರ್ಷದ ಹಿಂದೆ ಈಡುಗಾಯಿ ಹೊಡೆದ ಕಾಮಗಾರಿ ಇನ್ನು ಆಗಿಲ್ಲ ಎಂದು ಸ್ವತಃ ರಾಜು ಅವರೇ ಹೇಳಿದ್ದಾರೆ. ಆಡಳಿತ ಪಕ್ಷದವರೇ ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದಿದ್ದಾರೆ" ಎಂದು ಹೇಳಿದರು.
"ಒಬ್ಬ ಬಡವ ಮನೆ ತೆಗೆದುಕೊಳ್ಳಲು 30,000ರೂ. ನೀಡಬೇಕು ಎಂದು ಶಾಸಕ ಬಿಆರ್ ಪಾಟೀಲ್ ಹೇಳಿದ್ದರು. ನಮ್ಮ ರಾಜ್ಯದ ಬೊಕ್ಕಸವನ್ನು ಕಾಂಗ್ರೆಸ್ಸಿಗರು ಲೂಟಿ ಹೊಡೆಯುತ್ತಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತ ಮಂತ್ರಿಯನ್ನ ವಜಾ ಮಾಡಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.