ಉಡುಪಿ, ಜೂ. 23 (DaijiworldNews/TA): ನಗರದ ಮುಖ್ಯ ರಸ್ತೆಗಳ ಸರ್ಕಲ್ ಇರುವ ಸ್ಥಳಗಳಲ್ಲಿ ಸಿಗ್ನಲ್ ಕಂಬಗಳನ್ನು ಹತ್ತಾರು ವರ್ಷಗಳ ಹಿಂದೆ ಜಿಲ್ಲಾಡಳಿತ ಅಳವಡಿಸಿತ್ತು. ಆದರೆ ಕೆಲವು ತಿಂಗಳು ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ಕಂಬಗಳು ಇದೀಗ ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಮಳೆ ಗಾಳಿಗೆ ಧರೆಗೆ ಉರುಳುವ ಸಾಧ್ಯತೆ ಇದೆ. ನಗರಸಭೆಯು ತಕ್ಷಣ ನಗರದಲ್ಲಿರುವ ನಿರುಪಯುಕ್ತ ಕಂಬಗಳನ್ನು ತೆರವುಗೊಳಿಸಿ ಸಂಭವನೀಯ ದುರಂತ ತಪ್ಪಿಸಬೇಕಾಗಿದೆ. ಹಳೆ ತಾಲೂಕು ಕಚೇರಿ ಬಳಿ ಇರುವ, ಕೆನರಾ ಬ್ಯಾಂಕ್ ಎದುರಲ್ಲಿಯೂ ಸಿಗ್ನಲ್ ಕಂಬವೊಂದು ತುಂಡಾಗಿದ್ದು, ವಾಹನಗಳ, ಸಾರ್ವಜನಿಕರ ಮೇಲೆ ಬೀಳುವ ಸಾಧ್ಯತೆ ಕಂಡುಬಂದಿದೆ.
ಹಳೆ ಡಯಾನಾ ಸರ್ಕಲ್ ಬಳಿಯ ಪಾದಚಾರಿ ರಸ್ತೆಯ ಮೇಲೆ ಕೆಲವು ವರ್ಷಗಳಿಂದ ಸಿಗ್ನಲ್ ಕಂಬಗಳು ಕೂಡಿಡಲಾಗಿದೆ. ಇದೀಗ ಕಂಬಗಳ ಸುತ್ತಲು ಗಿಡ ಗಂಟಿ ಬೆಳೆದುನಿಂತಿದ್ದು, ವಿಷ ಜಂತುಗಳಿಗೆ ಆಶ್ರಯವಾದಂತಾಗಿದೆ.