ಬಂಟ್ವಾಳ, ಜೂ. 21 (DaijiworldNews/AA): ಪೋಲಿಸ್ ಠಾಣೆಯ ಪ್ರಕರಣವೊಂದನ್ನು ಬಗೆಹರಿಸಿಕೊಡುತ್ತೇನೆ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ಹಣವನ್ನು ಪಡೆದುಕೊಂಡಿದ್ದಲ್ಲದೆ, ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಮಡಂತ್ಯಾರು ನಿವಾಸಿ ರಾಜೇಶ್ ಕೆ. ಅವರು ವಂಚನೆಗೊಳಗಾದ ವ್ಯಕ್ತಿ. ಅವರು ಬೆಂಗಳೂರು ಮೂಲದ ಸಂಧ್ಯಾಪವಿತ್ರ ನಾಗರಾಜ್ ಅವರ ವಿರುದ್ಧ ದೂರು ನೀಡಿದ್ದಾರೆ. ರಾಜೇಶ್ ಅವರ ದೂರಿನ ಅನ್ವಯ ಜೂನ್ 20 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ ಅ.ಕ್ರ 37/2025 ಕಲಂ: 318(4), 351(2) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರಕರಣದ ಹಿನ್ನೆಲೆ
ರಾಜೇಶ್ ಕೆ. ಎಂಬವರು ಗಾಯಕರಾಗಿದ್ದು, 2024 ರಲ್ಲಿ ಫೇಸ್ ಬುಕ್ ಪೇಜ್ ವೊಂದರಲ್ಲಿ ಲೈವ್ ಆಗಿ ಗಾಯನ ಮಾಡುತ್ತಿದ್ದ ವೇಳೆ ಫೇಸ್ ಬುಕ್ ಮೂಲಕ ಪರಿಚಿತರಾದ ಸಂಧ್ಯಾ ಪವಿತ್ರ ನಾಗರಾಜ್ ಅವರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಇವರು ಸೌಜನ್ಯ ಪರ ಹೋರಾಟಗಾರ್ತಿ ಎಂದು ನಂಬಿಸಿ ಸೌಜನ್ಯ ಹೆಲ್ಪ್ ಲೈನ್ ಹೆಸರಿನಲ್ಲಿ ನೊಂದವರಿಗೆ ಹಾಗೂ ವಂಚನೆಗೊಳಗದಾವರಿಗೆ ಸಹಾಯ ಮಾಡುತ್ತಿರುವ ಬಗ್ಗೆ ಅವರಿಗೆ ನಂಬಿಸಿದ್ದರು.
ಇದರ ಜೊತೆ ರಾಜ್ಯದ ಅಮಾಯಕರ ಮೇಲೆ ದಾಖಲಾಗಿದ್ದ ಅನೇಕ ಪ್ರಕರಣಗಳನ್ನು ಪರಿಹರಿಸಿಕೊಟ್ಟಿರುವುದಾಗಿ ಹೇಳಿದ್ದರು. ಇವರ ಮಾತು ನಂಬಿದ ದೂರದಾರ ರಾಜೇಶ್ ಅವರ ವಿರುದ್ಧ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ತಿಳಿಸಿದ್ದಾರೆ. ಆರೋಪಿತೆ ಈ ಪ್ರಕರಣವನ್ನು ಹೈಕೋರ್ಟ್ ನಲ್ಲಿ ಬಗೆಹರಿಸುವುದಾಗಿ ನಂಬಿಸಿ, 2025ರ ಜನವರಿ ತಿಂಗಳಿನಲ್ಲಿ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಆಕೆಯ ಮನೆಗೆ ಬರಮಾಡಿಕೊಂಡು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದ್ದರು. ಪ್ರಕರಣ ಬಗೆಹರಿಸಲು ಖರ್ಚು ಇದೆ ಎಂದು 2025ರ ಫೆ. ತಿಂಗಳ 1 ರಿಂದ ಮೇ.17 ರ ವರೆಗೆ ಆಕೆ ಹಂತಹಂತವಾಗಿ ಒಟ್ಟು 3,20,000 ಹಣವನ್ನು ಪಡೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಣ ನೀಡಿದ ಬಳಿಕವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್ ಅವರು ಸಂಧ್ಯಾರನ್ನ ಪ್ರಶ್ನಿಸಿದ್ದಾರೆ. ಆಗ ಆಕೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂಧ್ಯಾ ಮಾತು ಕೇಳಿ ಸಂಶಯಗೊಂಡ ರಾಜೇಶ್ ಅವರು ಕೋರ್ಟ್ಗೆ ಸಲ್ಲಿಸಿರುವ ದಾಖಲೆಗಳನ್ನು ಕೇಳಿದ್ದಾರೆ. ಈ ವೇಳೆ ಸಂಧ್ಯಾ ಹೆಂಗಸರನ್ನು ಕರೆತಂದು ಹಲ್ಲೆ ಮಾಡಿ ಕೈ ಕಾಲು ಮುರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಫೇಸ್ ಬುಕ್ ಲೈವ್ ನಲ್ಲಿ ಹಾಕಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.