ಮಂಗಳೂರು, ಜೂ. 15 (DaijiworldNews/AA): ಪೈಪ್ಲೈನ್ ಯೋಜನೆಗಾಗಿ ಅಗೆದ ಹೊಂಡಕ್ಕೆ ಸ್ಕೂಟರ್ ಬಿದ್ದು ಕೆಎಸ್ಆರ್ಪಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ ಗಂಭೀರ ಗಾಯವಾದ ಘಟನೆ ತೊಕ್ಕೊಟ್ಟು ಪಂಡಿತ್ ಹೌಸ್ ಬಳಿ ನಡೆದಿದ್ದು, ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ ನಗರಸಭೆಯು ಪೈಪ್ಲೈನ್ ಕಾಮಗಾರಿಗೆ ಅಗೆದ ಹೊಂಡಕ್ಕೆ ಕೆಎಸ್ಆರ್ಪಿ ನಿವೃತ್ತ ಪೊಲೀಸ್ ಅಧಿಕಾರಿ ಬಿ. ಆರ್. ಬಡಿಗೇರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಕುತ್ತಾರುವಿನಿಂದ ತೊಕ್ಕೊಟ್ಟಿನ ಕಡೆಗೆ ತೆರಳುತ್ತಿದ್ದಾ ಪಂಡಿತ್ ಹೌಸ್ ಬಳಿ ಪೈಪ್ಲೈನ್ ಕಾಮಗಾರಿಗಾಗಿ ಅಗೆದಿದ್ದ ಹೊಂಡಕ್ಕೆ ಅವರ ಸ್ಕೂಟರ್ ಬಿದ್ದಿದೆ. ಇದೇ ಪ್ರದೇಶದಲ್ಲಿ ಈ ಹಿಂದೆ ಮಹಿಳೆಯೊಬ್ಬರು ರಸ್ತೆ ದಾಟುವಾಗ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದರು.
ಪ್ರಸ್ತುತ ಕಾಮಗಾರಿ ತಾತ್ಕಾಲಿಕವಾಗಿದ್ದು, ಶೀಘ್ರದಲ್ಲೇ ಶಾಶ್ವತ ಪರಿಹಾರವನ್ನು ಜಾರಿಗೆ ತರಲಾಗುವುದು ಎಂದು ಉಳ್ಳಾಲ ನಗರಸಭೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.