ಮಂಗಳೂರು, ಜೂ. 15 (DaijiworldNews/AA): ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಎಲ್ಲಾ ತಹಶೀಲ್ದಾರರು ಹಾಗೂ ಇನ್ಸಿಡೆಂಟ್ ಕಮಾಂಡರ್ಗಳಿಗೆ ಅಪಾಯದಲ್ಲಿರುವ ಮನೆಗಳಿಂದ ಕುಟುಂಬಗಳನ್ನು ತಕ್ಷಣವೇ ಕಾಳಜಿ ಕೇಂದ್ರಗಳಿಗೆ ಅಥವಾ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನ ನೀಡಿದ್ದಾರೆ.













ನೆರೆ ಉಂಟಾಗುವ ಪ್ರದೇಶಗಳ ಮೇಲೆ ನಿಗಾ ವಹಿಸಿ ಎಲ್ಲಾ ರಕ್ಷಣಾ ಸಾಮಾಗ್ರಿಗಳನ್ನು ಸಿದ್ಧವಾಗಿರಿಸಬೇಕು. ಯಾವುದೇ ಸಾವು ನೋವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಾ ತಾಲೂಕುಗಳು ಮತ್ತು ಮಹಾನಗರಪಾಲಿಕೆಗಳಲ್ಲಿ ಕಂಟ್ರೋಲ್ ರೂಂ ದಿನದ ಇಪ್ಪತ್ನಾಲ್ಕು ಗಂಟೆಯೂ ಕಾರ್ಯನಿರ್ವಹಿಸಬೇಕು. ಪ್ರಾಕೃತಿಕ ವಿಕೋಪ ಕಾರ್ಯಾಚರಣೆಗಳಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಮಳೆ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿ ಭೇಟಿ
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಮಂಗಳೂರು ನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರು ನಗರದ ಹಲವಾರು ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅವರು ಪಂಪ್ ವೆಲ್ಗೆ ಭೇಟಿ ನೀಡಿ, ಮಳೆ ನೀರು ಸರಾಗ ಹರಿವಿನ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
12 ಕುಟುಂಬಗಳು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ
ಮಂಗಳೂರಿನ ಅತ್ತಾವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಹಲವು ಕುಟುಂಬಗಳಿಗೆ ತೊಂದರೆಯುಂಟಾಗಿದ್ದು, 12 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಆ ಕುಟುಂಬಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಪುರಭವನ ಆವರಣದಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದ್ದು, ಅಲ್ಲಿ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ. ನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ
ಶನಿವಾರ ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದ್ದು, ಯಾವುದೇ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಮಧ್ಯಾಹ್ನ 2 ಗಂಟೆಯ ನಂತರ ತಾಲೂಕಿನ ಹಲವೆಡೆ ಮಳೆ ತೀವ್ರಗೊಂಡಿದೆ. ಕಾಶಿಪಟ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ತೆರವಿನ ವೇಳೆ ತೆರವು ಮಾಡದೇ ಉಳಿಸಿದ್ದ ಗೋಡೆಯ ಒಂದು ಭಾಗ ಕುಸಿದಿದ್ದು, ಆದರೆ ಯಾವುದೇ ಹಾನಿಯುಂಟಾಗಿಲ್ಲ. ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ರಾತ್ರಿ ವೇಳೆಯಲ್ಲಿ ಬಲವಾದ ಗಾಳಿ ಮತ್ತು ಮಳೆಯಾಗುತ್ತಿದೆ.
ಪುತ್ತೂರು, ಸುಳ್ಯ, ಸುಬ್ರಹ್ಮಣ್ಯದಲ್ಲಿ ನಿರಂತರ ಮಳೆ
ಈ ಪ್ರದೇಶಗಳಲ್ಲಿ ಶನಿವಾರದಾದ್ಯಂತ ಉತ್ತಮ ಮಳೆಯಾಗಿದೆ. ಕೆಲ ದಿನಗಳ ಕಾಲ ಮಳೆ ಬಿಡುವು ಪಡೆದುಕೊಂಡಿತ್ತು. ಆದರೆ ಶನಿವಾರ ಮಧ್ಯಾಹ್ನದ ನಂತರ ರಾತ್ರಿ ವರೆಗೂ ಭಾರಿಯಾಗಿದೆ. ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಬೆಳ್ಳಾರೆ, ಅರಂತೋಡು, ಸಂಪಾಜೆ, ಗುತ್ತಿಗಾರು, ಪಂಜ, ಬೆಳ್ಳಾರೆ, ಕೊಲ್ಲಮೊಗ್ರು, ಸುಬ್ರಹ್ಮಣ್ಯ, ಬಳ್ಪ, ಕೈಕಂಬ, ಮತ್ತು ಬಿಳಿನೆಲೆ ಸೇರಿದಂತೆ ಹಲವು ಸ್ಥಳಗಳಲ್ಲಿ ದಿನವಿಡೀ ಮಳೆ ಸುರಿದಿದೆ. ಭಾರೀ ಮಳೆಯ ಹೊರತಾಗಿಯೂ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಉಡುಪಿ ಜಿಲ್ಲೆಯಾದ್ಯಂತ ತೀವ್ರ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶನಿವಾರ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಕೆಲವು ಸ್ಥಳಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರೂ, ಯಾವುದೇ ಅನಾಹುತ ಸಂಭವಿಸಿಲ್ಲ. ರಸ್ತೆಗಳು ಜಲಾವೃತಗೊಂಡ ಕಾರಣ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ರೆಡ್ ಅಲರ್ಟ್ ಇಂದು ಕೊನೆಯಾಗಲಿದ್ದು, ಜೂನ್ 16 ರಿಂದ 17 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮತ್ತಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಗೆ ಐದು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮನೆಗಳ ಮೇಲೆ ಮರಗಳು ಬಿದ್ದು ಅಂದಾಜು 1.77 ಲಕ್ಷ ರೂ. ನಷ್ಟವಾಗಿದೆ. ಬೈಂದೂರು ಮತ್ತು ಕುಂದಾಪುರದಲ್ಲಿ ಸಾಧಾರಣ ಮಳೆ ವರದಿಯಾದರೆ, ಉಡುಪಿ, ಮಣಿಪಾಲ ಮತ್ತು ಪರ್ಕಳ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಮಧ್ಯಾಹ್ನದ ನಂತರ ಭಾರೀ ಮಳೆ ಸುರಿಯಿತು. ಕಾರ್ಕಳ, ಹೆಬ್ರಿ, ಪಡುಬಿದ್ರಿ, ಬ್ರಹ್ಮಾವರ, ಕೋಟ, ಸಾಲಿಗ್ರಾಮ, ಕಾಪು, ಉಚ್ಚಿಲ ಮತ್ತು ಶಿರ್ವ ಭಾಗದಲ್ಲಿ ದಿನವಿಡೀ ಭಾರೀ ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯುಂಟಾಯಿತು.
ಕಾರ್ಕಳ, ಹೆಬ್ರಿಯಲ್ಲಿ ಬಿರುಸಿನ ಮಳೆ
ಕಾರ್ಕಳ, ಹೆಬ್ರಿ, ಆಗುಂಬೆ, ಸೋಮೇಶ್ವರ, ಶಿವಪುರ, ಮುದ್ರಾಡಿ, ಕಬ್ಬಿನಾಲೆ, ಕಾರ್ಕಳದ ಮರ್ಣೆ, ಶಿರ್ಲಾಲು, ಕೆರ್ವಾಶೆ, ಮಾಳ, ಮುಡಾರು, ದುರ್ಗಾ, ರೆಂಜಾಳ, ಕಲ್ಯಾ, ನಿಂಜೂರು, ಬೈಲೂರು, ಕೌಡೂರು ಮತ್ತು ಕುಕ್ಕೂಂದೂರು ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರ ಮಳೆ ಸುರಿದಿದೆ. ಕೆಲವು ಕಡೆಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.