ಉಡುಪಿ, ಜೂ. 14 (DaijiworldNews/AK): ಉಡುಪಿಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ನೀಡಿದರು. ಅವರು ಇಂದು ಉಡುಪಿಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿದರು. ಬಳಿಕ ಮೂಕಾಂಬಿಕೆಯ ದರ್ಶನ ಪಡೆದು ದೇವಳಯದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾದರು.

ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ದೇವಸ್ಥಾನಕ್ಕೆ ಹೋಗೋದು ನಮ್ಮ ಸಂಪ್ರದಾಯ. ಹಾಗಾಗಿ ಮೂಕಾಂಬಿಕಾ ತಾಯಿಗೆ ನಮಸ್ಕಾರ ಹಾಕಿ ಬಂದಿದ್ದೇನೆ. ಆದರೆ ಯಾಕೆ ಏನು ಅಂತ ನೀವು ಕೇಳ್ಬಾರ್ದು, ಅದೇ ರೀತಿ ನಾನು ಕೂಡ ಹೇಳ್ಬಾರ್ದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ದೇವಾಲಯಕ್ಕೆ ಭೇಟಿ ನನ್ನ ವೈಯುಕ್ತಿಕ ವಿಚಾರ. ಹಾಗಾಗಿ ಇದು ಅಫೀಶಿಯಲ್ ಅಲ್ಲ ಎಂದು ತಿಳಿಸಿದ ಅವರು ಕರಾವಳಿಯಲ್ಲಿ ವಿಶೇಷ ಕಾರ್ಯಪಡೆಗೆ ಚಾಲನೆ ವಿಚಾರದ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದರು.
ಕರಾವಳಿ ಭಾಗದಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿ ಆಧಾರದಲ್ಲಿ ಕಾರ್ಯಪಡೆ ರಚನೆಯಾಗಿದೆ. ಉಡುಪಿಯಲ್ಲೂ ವಿಶೇಷ ಕಾರ್ಯಪಡೆಗೆ ಬಿಜೆಪಿ ನಾಯಕರಿಂದ ವಿರೋಧ ವ್ಯಕ್ತವಾಗಿದೆ. ಆದರೆ ಯಾವುದೇ ಜಿಲ್ಲೆಯನ್ನ ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ನಾವು ಮಾಡಿಲ್ಲ. ಅದರ ಅಗತ್ಯ ಬರಬಾರದೆಂದು ಈಗಾಗಲೇ ಹೇಳಿದ್ದೇನೆ. ಈ ಫೋರ್ಸ್ ಉಪಯೋಗ ಆಗದಿರುವಂತೆ ನೋಡಿಕೊಳ್ಳಿ ಅಂತ ಸಾರ್ವಜನಿಕವಾಗಿ ಮನವಿ ಮಾಡಿದ್ದೇನೆ ಎಂದರು. ಕೋಮುವಾದಕ್ಕೆ ಸಂಬಂಧಪಟ್ಟ ಘಟನೆ ನಡೆಯದಿದ್ದಲ್ಲಿ ಈ ಕಾರ್ಯಪಡೆ ಅಗತ್ಯ ಬರೋದಿಲ್ಲ ಎಂದು ಅವರು ತಿಳಿಸಿದರು.