ಬಂಟ್ವಾಳ, ಜೂ. 13 (DaijiworldNews/TA) : ಜೀಪಿನಲ್ಲಿ ಹೋಗುತ್ತಿದ್ದ ಚಾಲಕರೊಬ್ಬರ ಮೇಲೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ತಲವಾರಿನಿಂದ ದಾಳಿಗೆ ಯತ್ನಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೇರಾಜೆ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಜೀಪ ಮುನ್ನೂರು ನಿವಾಸಿ ಉಮ್ಮರ್ ಫಾರೂಕ್ ಎಂಬವರು ದೂರು ನೀಡಿದ್ದಾರೆ. ಫಾರೂಕ್ ಜೂನ್ 11 ರಂದು ಮನೆಯಿಂದ ಮುಂಜಾನೆ ದೇರಳಕಟ್ಟೆ ಕಡೆಗೆ ಜೀಪಿನಲ್ಲಿ ತೆರಳುತ್ತಾ, ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಕಡೆಗೆ ತಲುಪುತ್ತಿದ್ದಂತೆ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ಹಿಂಬದಿಯ ಸವಾರ ತಲವಾರಿನಿಂದ ಬೀಸಿದ್ದಾನೆ.
ಘಟನೆಯಿಂದ ಜೀಪಿನ ಸೈಡ್ ಮಿರರ್ ಒಡೆದಿರುತ್ತದೆ ಎಂದು ಫಾರೂಕ್ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.