ಉಡುಪಿ, ಜೂ. 13 (DaijiworldNews/TA): ಜಾಗತಿಕ ಫ್ಯಾಟಿ ಲಿವರ್ ಡೇ ಪ್ರಯುಕ್ತ ಉಡುಪಿಯ ಆದರ್ಶ ಆಸ್ಪತ್ರೆ ವತಿಯಿಂದ ಲಿವರ್ ಹೆಲ್ತ್ ಸ್ಕ್ರೀನಿಂಗ್ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರವನ್ನು ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ‘ರೋಗ ಬರುವುದುಕ್ಕೂ ಮುನ್ನ ರೋಗವನ್ನು ತಡೆಗಟ್ಟುವ ಕುರಿತಾಗಿ ನಾವು ಎಚ್ಚರಿಕೆ ವಹಿಸಬೇಕು.
ಜಾಗತಿಕ ಲಿವರ್ ಫ್ಯಾಟ್ ಡೇ ಯ ಮೂಲಕ ಜನರಲ್ಲಿ ಯಕೃತ್ತಿನ ಕುರಿತಾಗಿ ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಗಿದೆ. ವೈದ್ಯರಾಗಿ, ನಮ್ಮ ಜವಾಬ್ದಾರಿ ರೋಗಗಳಿಗೆ ಚಿಕಿತ್ಸೆ ನೀಡುವುದನ್ನು ಮಾತ್ರವಲ್ಲದೇ, ಅವುಗಳನ್ನು ತಡೆಗಟ್ಟಲು ಸಹ ನಾವು ಕೆಲಸ ಮಾಡಬೇಕು. ಲಿವರ್ ಸಮಸ್ಯೆಗಳಿಗೆ ಎರಡು ಪ್ರಮುಖ ಕಾರಣಗಳು ಕೊಬ್ಬಿನ ಶೇಖರಣೆ ಮತ್ತು ಮದ್ಯಪಾನ, ಇದು ಜೀವನದ ಎಲ್ಲಾ ಹಂತಗಳ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಗ್ಯಾಸ್ಟ್ರೋಎಂಟರಾಲಜಿ ಸಲಹೆಗಾರ ಡಾ. ಸತೀಶ್ ಕೆ ನಾಯಕ್ ಅವರು ಯಕೃತ್ತಿನ ಆರೋಗ್ಯದ ಕುರಿತಾಗಿ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂಧರ್ಭದಲ್ಲಿ ಉಚಿತ ಯಕೃತ್ತು ತಪಸಣಾ ಶಿಬಿರವು ಕೂಡಾ ನಡೆಯಿತು. ಕಾರ್ಯಕ್ರಮದಲ್ಲಿ ಅದಾನಿ ಪವರ್ ಕಾರ್ಪೋರೇಶನ್ ನ ವೈದ್ಯಾಧಿಕಾರಿ ಡಾ. ಪ್ರಭುದೇವ, ಮೂತ್ರಪಿಂಡ ವಿಭಾಗದ ಡಾ. ಮೇಘಾ ಪೈ, ಸ್ತ್ರೀ ರೋಗ ತಜ್ಞೆ ಡಾ. ರಂಜಿತಾ ನಾಯಕ್, ಹೃದ್ರೋಗ ತಜ್ಞ ಡಾ. ಶ್ರೀಕಾಂತ್, ಡಾ. ಸುನಿಲ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.