ಬಂಟ್ವಾಳ, ಜೂ. 12 (DaijiworldNews/AK): ತಹಶಿಲ್ದಾರ್ ಅದೇಶ ಧಿಕ್ಕರಿಸಿ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ವಾಹನಗಳು ಸಂಚಾರ ಮಾಡುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಬ್ರಿಟಿಷ್ ಕಾಲದ ಉಕ್ಕಿನ ಸೇತುವೆಯ ಸಾಮರ್ಥ್ಯ ಪರೀಕ್ಷೆ ಮಾಡಿ ವರದಿ ನೀಡುವಂತೆ ತಹಶಿಲ್ದಾರ್ ಅರ್ಚನಾ ಭಟ್ ಅವರು ಕೆಲ ಸಮಯದ ಹಿಂದೆ ಸೇತುವೆಯ ನಿರ್ವಹಣೆ ಮಾಡುವ ಬಂಟ್ವಾಳ ಪುರಸಭೆಗೆ ಸೂಚನೆ ನೀಡಿದ್ದರು. ದ.ಕ.ಜಿಲ್ಲೆಯ ಎಲ್ಲಾ ಸೇತುವೆಗಳ ಸಾಮರ್ಥ್ಯ ಪರೀಕ್ಷೆಗೆ ಸರಕಾರ ಅದೇಶ ಮಾಡಿದ ಹಿನ್ನೆಲೆಯಲ್ಲಿ ಪಾಣೆಮಂಗಳೂರು ಸೇತುವೆಯ ಸಾಮಾರ್ಥ್ಯ ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು.


ಆದರೆ ಪುರಸಭೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿತ್ತು. ಜನರ ಸುರಕ್ಷತೆಯ ದೃಷ್ಟಿಯಿಂದ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಯಾವುದೇ ವಾಹನಗಳು ಸಂಚಾರ ಮಾಡದಂತೆ ಪುರಸಭೆ ಕ್ರಮಕೈಗೊಳ್ಳುವಂತೆ ಅದೇಶ ಮಾಡಲಾಗಿತ್ತು. ಅದೇಶ ಮಾಡಿ ಒಂದು ದಿನವಾದರೂ ಪುರಸಭೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಆದೇಶ ಹೊರಡಿಸಿದ ತಹಶಿಲ್ದಾರ್ ಅರ್ಚನಾ ಭಟ್ ಅವರು ಪೋಲೀಸ್ ಇಲಾಖೆಯ ಅಧಿಕಾರಿಗಳಿಗೆ ಪೋನ್ ಮಾಡಿ ಸೇತುವೆಯ ಎರಡು ಭಾಗದಲ್ಲಿ ಬಂದ್ ಮಾಡುವಂತೆ ತಿಳಿಸಿದ್ದರು.ಅವರ ಅದೇಶದಂತೆ ಎರಡು ಬದಿಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಂಚಾರ ನಿಷೇಧ ಮಾಡಲಾಗಿತ್ತು.
ಆದರೆ ಮಧ್ಯಾಹ್ನದ ಬಳಿಕ ಯಾವುದೇ ಅಧಿಕೃತ ಅದೇಶವಿಲ್ಲದೆ ಬಲಾತ್ಕಾರವಾಗಿ ಸೇತುವೆಯಲ್ಲಿ ನಿಷೇಧ ಹೇರಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತೆರವು ಮಾಡಿ ಮತ್ತೆ ಸಂಚಾರ ಆರಂಭಿಸಿವೆ. ಸೇತುವೆಯಲ್ಲಿ ವಾಹನಗಳ ಸಂಚಾರ ನಿಷೇಧ ಮಾಡಿ ಅದೇಶ ಹೊರಡಿಸಿದ ತಹಶಿಲ್ದಾರ್ ಅವರ ಜೊತೆ ಸ್ಥಳೀಯರು ಹಾಗೂ ಜವಾಬ್ದಾರಿಯುತ ಪುರಸಭಾ ಸದಸ್ಯರುಗಳು ಸೇರಿಕೊಂಡು ಸಭೆ ನಡೆಸಿ, ಅಲ್ಲಿನ ವಾಸ್ತವ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಬಹುದಿತ್ತು. ಬಳಿಕ ಅವರ ಮನವೊಲಿಸಿ ಅಧಿಕೃತ ಆದೇಶವನ್ನು ಪಡೆದುಕೊಂಡು ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ಕೇಳಬಹುದಿತ್ತು. ಅಥವಾ ಪುರಸಭೆಗೆ ಒತ್ತಾಯಿಸಿ ಶೀಘ್ರವಾಗಿ ಸೇತುವೆ ಸಾಮರ್ಥ್ಯ ಪರೀಕ್ಷೆ ನಡೆಸಿ ವರದಿ ಬಳಿಕ ಯಾವ ಕ್ರಮ ಕೈಗೊಳ್ಳುವಬಹುದು ಎಂಬುದನ್ನು ಅಲೋಚಿಸಬಹುದಿತ್ತು.
ಆದರೆ ಇಲ್ಲಿ ತಾಲೂಕಿನ ದಂಡಾಧಿಕಾರಿಯವರ ಅದೇಶವನ್ನು ಗಾಳಿಗೆ ತೂರಿ ನಿಯಮಬಾಹಿರ ಮತ್ತು ಕಾನೂನುಬಾಹಿರವಾಗಿ ಮಾಡಿರುವ ಕ್ರಮ ಸರಿಯಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.
ಸಂಚಾರಕ್ಕೆ ಅವಕಾಶ ಮಾಡಿಕೊಡಿ: ಪುರಸಭಾ ಸದಸ್ಯರಿಂದ ಒತ್ತಾಯ
ಪಾಣೆಮಂಗಳೂರು ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಗೊಳ್ಳಲು ಒತ್ತಾಯಿಸಿ ಹಾಗೂ ಸೇತುವೆಯನ್ನು ಬಂದ್ ಮಾಡದಂತೆ ಒತ್ತಾಯಿಸಿದ್ದಾರೆ. ಪಾಣೆಮಂಗಳೂರಿನ ಸಾರ್ವಜನಿಕರು ಪುರಸಭಾ ಸದಸ್ಯರಾದ ಸಿದ್ದೀಕ್ ಗುಡ್ಡೆಯಂಗಡಿ ಹಾಗೂ ಇದ್ರೀಸ್ ಪಿ.ಜೆ. ಸಹಿತ ಪ್ರಮುಖರು ಈ ಸಂದರ್ಭ ಹಾಜರಿದ್ದರು.
ಈ ಕುರಿತು ಪುರಸಭಾ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಮಾತನಾಡಿ, ಈಗಾಗಲೇ ಪುರಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗಿದ್ದು, ಸೇತುವೆಯಲ್ಲಿ ಡ್ಯಾಮೇಜ್ ಆಗಿಲ್ಲ, ಕೇವಲ ಡಾಂಬರು ಎದ್ದುಹೋಗಿದೆ, ಗಾಳಿಸುದ್ದಿ ಹಬ್ಬಿದ ಕಾರಣ ಇದನ್ನು ಬಂದ್ ಮಾಡುವ ನಿರ್ಧಾರ ಮಾಡಲಾಗಿದ್ದು, ಮುಖ್ಯಾಧಿಕಾರಿಯವರೊಂದಿಗೆ ಮಾತನಾಡಲಾಗಿದ್ದು, ಸೇತುವೆ ಹೇಗಿದೆ ಎಂಬುದನ್ನು ಪರಿಶೀಲನೆ ನಡೆಸಲಿ. ಎಲ್ಲರೂ ಒಕ್ಕೊರಲಾಗಿ ನಾವು ಮನವಿ ನೀಡಿದ್ದೇವೆ. ಮುಖ್ಯಾಧಿಕಾರಿಯವರು ಯಥಾಸ್ಥಿತಿಯಲ್ಲಿ ವಾಹನ ಓಡಲಿ ಎಂದು ತಿಳಿಸಿದ್ದಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಡಾಂಬರು ಹಾಕಿ ಅಭಿವೃದ್ಧಿಯಾಗಲಿ ಎಂದು ಹೇಳಿದರು.