ಮಂಗಳೂರು, ಜೂ. 12 (DaijiworldNews/TA): ಜಿಲ್ಲೆಯ ಕೋಮು ಗಲಾಟೆಯಲ್ಲಿ ಹಾಗೂ ಜಿಲ್ಲೆಯ ಭವಿಷ್ಯದ ದೃಷ್ಠಿಯಿಂದ ಯಾರೂ ರಾಜಕೀಯ ಮಾಡಬಾರದು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜಪೆಯ ಸುಹಾಸ್ ಶೆಟ್ಟಿ ಕೊಲೆ ಆದಾಗಲೇ ಪ್ರತಿಕಾರ ಆಗುವ ವಿಚಾರ ಹರಡಿತ್ತು. ಅದೂ ಅಲ್ಲದೆ ಆಗ ದ್ವೇಷ ಭಾಷಣ,ಕೊಲೆಗೆ ಪ್ರಚೋದಿಸುವ ಮಾತುಗಳು ಕೇಳಿಬಂದಿತ್ತು. ಆಗ ಪೊಲೀಸ್ ಇಲಾಖೆ ಸೂಕ್ತ ರೀತಿಯ ಮಾಹಿತಿ ಇದ್ದರೂ ಸುಮ್ಮನೆ ಕೂತಿತ್ತು.
ಆದರೆ ಈ ಪ್ರತೀಕಾರ ಜಿಲ್ಲೆಗೆ ಕಪ್ಪುಚುಕ್ಕೆ ಯಾಗಿದೆ. ಒಟ್ಟಿಗೆ ಆಟ ಆಡುತ್ತಿದ್ದವರು, ನೆರವು ಪಡೆದವರೇ ರಹಿಮಾನ್ ಕೊಲೆ ಮಾಡಿದ್ದಾರೆ. ಕುಡುಪು ಅಶ್ರಫ್, ಸುಹಾಸ್ ಶೆಟ್ಟಿ, ರಹಿಮಾನ್ ಕೊಲೆ ಆರೋಪಿಗಳನ್ನು ಸಮಾಜ ,ಲಾಯರ್ ಸೇರಿದಂತೆ ಎಲ್ಲರೂ ದೂರ ಇಡಬೇಕು. ಕೊಲೆ ಆರೋಪಿಗಳಿಗೆ ಕಠಿಣವಾದ ಕ್ರಮ ಆಗಬೇಕು. ಪ್ರತೀಕಾರದ ಕೊಲೆಗೆ ಇಲ್ಲಿಗೇ ಅಂತ್ಯವಾಗಬೇಕು ಎಂದು ಅವರು ತಿಳಿಸಿದರು.