ಕಾಸರಗೋಡು, ಜೂ. 11 (DaijiworldNews/TA): 4ನೇ ತರಗತಿಯಲ್ಲಿದ್ದಾಗ ನಡೆದ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಇಬ್ಬರು ವ್ಯಕ್ತಿಗಳು ತಮ್ಮ ಶಾಲಾ ಸಹಪಾಠಿಯ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದ ವಿಚಿತ್ರ ಘಟನೆಯೊಂದು ಕೇರಳದ ಕಾಸರಗೋಡು ಜಿಲ್ಲೆಯ ಮಾಲೋಮ್ ಪಟ್ಟಣದಲ್ಲಿ ನಡೆದಿದೆ.

ತಮ್ಮ ಮಾಜಿ ಸಹಪಾಠಿಯನ್ನು ಥಳಿಸಿದ ಇಬ್ಬರು ವ್ಯಕ್ತಿಗಳನ್ನು ಮಾಲೋತು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಪ್ಲಕ್ಕಲ್ ಎಂದು ಗುರುತಿಸಲಾಗಿದ್ದು, ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ವಿಜೆ ಬಾಬು ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಬಾಬು ತನ್ನ ಎರಡು ಹಲ್ಲುಗಳನ್ನು ಕಳೆದುಕೊಂಡು ಕಣ್ಣೂರಿನ ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿದ ವೆಲ್ರಿಕುಂಡು ಇನ್ಸ್ಪೆಕ್ಟರ್ ಟಿ ಕೆ ಮುಕುಂದನ್, 62 ವರ್ಷದ ಬಾಬು ಎಂಬ ವ್ಯಕ್ತಿಯೊಬ್ಬನನ್ನು ಅವರ ಇಬ್ಬರು ಮಾಜಿ ಸಹಪಾಠಿಗಳು ಐದು ದಶಕಗಳ ಹಿಂದೆ 4 ನೇ ತರಗತಿಯಲ್ಲಿ ಒಟ್ಟಿಗೆ ಇದ್ದಾಗ ಅವರ ನಡುವೆ ನಡೆದ ವಿವಾದವೊಂದಕ್ಕೆ ಸಂಬಂಧಿಸಿ ಕಲ್ಲಿನಿಂದ ಮುಖಕ್ಕೆ ಹೊಡೆದು ಗಾಯಗೊಳಿಸಿದ್ದಾರೆ ಅಲ್ಲದೆ ಹೊಡೆದ ಪೆಟ್ಟಿಗೆ ಬಾಬು ಅವರ ಎರಡು ಹಲ್ಲುಗಳು ಮುರಿದು ಹೋಗಿದೆ ಈ ಕುರಿತು ಬಾಬು ಅವರು ನೀಡಿರುವ ದೂರಿನ ಆಧಾರದ ಮೇಲೆ ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಬಾಲಕೃಷ್ಣನ್, ಮ್ಯಾಥ್ಯೂ ಮತ್ತು ಬಾಬು ಸುಮಾರು ಐದು ದಶಕಗಳ ಹಿಂದೆ ಬಲಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು ಎನ್ನಲಾಗಿದೆ. ಪೊಲೀಸರ ವಿಚಾರಣೆ ವೇಳೆ ಬಾಲಕೃಷ್ಣನ್ ತಾನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ವೇಳೆ ಬಾಬು ನನ್ನ ಮೇಲೆ ಹಲ್ಲೆ ನಡೆಸಿದ್ದ ಈ ವಿಚಾರಕ್ಕೆ ಸಂಬಂಧಿಸಿ ಆಗಾಗ ನಮ್ಮ ನಡುವೆ ಜಗಳಗಳು ನಡೆಯುತ್ತಿತ್ತು ಆದರೆ ಸೋಮವಾರ(ಜೂ.2) ರಂದು ಮಾಲೋಮ್ನ ಜನಗ್ರಾಮ್ ಹೋಟೆಲ್ ಹೊರಗೆ ನಾವು ಮೂವರು ಎದುರುಬದುರಾಗಿದ್ದು ಈ ವೇಳೆ ಅದೇ ಹಳೆಯ ಜಗಳದ ವಿಚಾರ ಮುನ್ನೆಲೆಗೆ ಬಂದು ಮಾತಿಗೆ ಮಾತು ಬೆಳೆದು ಈ ವೇಳೆ ನಾನು (ಬಾಲಕೃಷ್ಣನ್) ಬಾಬು ಅವರನ್ನು ನೆಲಕ್ಕೆ ಬೀಳಿಸಿ ಒತ್ತಿ ಹಿಡಿದೆ ಈ ಸಂದರ್ಭ ನನ್ನ ಜೊತೆಗಿದ್ದ ಮ್ಯಾಥ್ಯೂ ಕಲ್ಲಿನಿಂದ ಬಾಬು ಅವರ ಮುಖ ಮತ್ತು ದೇಹದ ಭಾಗಕ್ಕೆ ಹಲ್ಲೆ ನಡೆಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.