ಬಂಟ್ವಾಳ, ಜೂ. 10 (DaijiworldNews/AK): ಅಡಿಕೆ ವ್ಯಾಪಾರಿಯೊಬ್ಬರು ಕೃಷಿಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದು ,ಇದೀಗ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಸೋಮವಾರ ಪಟ್ಟಣ ಪೊಲೀಸ್ ಠಾಣೆ ಮುಂದೆ 50 ಕ್ಕೂ ಹೆಚ್ಚು ಕೃಷಿಕರು ಜಮಾಯಿಸಿ, ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಎಬಿ ಸುಫಾರಿ ಅಂಗಡಿ ಹೊಂದಿರುವ ನಾವೂರ ಗ್ರಾಮದ ಮೈಂದಾಳ ನಿವಾಸಿ ನೌಫಲ್ ಎನ್ ವಿರುದ್ಧ ದೂರು ದಾಖಲಿಸಿದರು.
ಇಂದು ಸುಮಾರು 50 ಕ್ಕೂ ಅಧಿಕ ಕೃಷಿಕರು ಬಂಟ್ವಾಳ ನಗರ ಪೋಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ಪ್ರತಿಯೊಬ್ಬರು ಕೂಡ ಅಡಿಕೆ ವ್ಯಾಪಾರಿ ಬಂಟ್ವಾಳ ಬಡ್ಡಕಟ್ಟೆಯಲ್ಲಿ ಎ.ಬಿ.ಸುಫಾರಿ ಅಂಗಡಿಯನ್ನು ಹೊಂದಿರುವ ನಾವೂರ ಗ್ರಾಮದ ಮೈಂದಾಳ ನಿವಾಸಿ ನೌಫಲ್ ಎನ್.ವಿರುದ್ದ ದೂರು ನೀಡಿದ್ದಾರೆ.
ಸ್ಥಳೀಯ ಕೃಷಿಕ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಸಾಲದ ಮೊತ್ತ ಪಾವತಿಯ ಹಿನ್ನಲೆಯಲ್ಲಿ ವ್ಯಾಪಾರಿಯ ಬಳಿ ಹಣಕ್ಕಾಗಿ ಹೋದಾಗ ಆತ ಪರಾರಿಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಕೃಷಿಕರೆಲ್ಲರು ಒಂದಾಗಿ ಆತನ ವಿರುದ್ದ ದೂರು ನೀಡಲು ಮುಂದಾಗಿದ್ದಾರೆ. ಈತ ಸ್ಥಳೀಯ ಕೃಷಿಕರ ವಿಶ್ವಾಸಾರ್ಹ ವರ್ತಕನಾಗಿದ್ದು, ಕಳೆದ ಎರಡು ಮೂರು ದಶಕಗಳಿಂದ ಕೃಷಿಕರು ಈತನಿಗೆ ಒಣ ಅಡಿಕೆ ನೀಡುತ್ತಿದ್ದರು. ಆತ ಯಾವುದೇ ರೀತಿಯಲ್ಲಿ ವಂಚಿಸದೆ ಕೃಷಿಕರ ಅಗತ್ಯಕ್ಕೆ ತಕ್ಕಂತೆ ಹಣ ನೀಡುತ್ತಿದ್ದನು. ಆದರೆ ಈ ಬಾರಿ ಒಬ್ಬಬ್ಬ ಕೃಷಿಕನಿಗೆ ಲಕ್ಷಾಂತರ ರೂ ಹಣ ವಂಚನೆ ಮಾಡಿದ್ದು ಒಟ್ಟು ಮೊತ್ತ 10 ಕೋಟಿ ಆಗಬಹುದೆಂದು ಕೃಷಿಕರು ಆರೋಪಿಸಿದ್ದಾರೆ.