ಉಡುಪಿ: ಬೆಂಗಳೂರು ಕಾಲ್ತುಳಿತ; 'ನಾನು ಯಾವುದೇ ಎಫ್ಐಆರ್ ದಾಖಲಿಸಿಲ್ಲ'- ಸಂತ್ರಸ್ತ ರೋಲನ್ ಗೊಮ್ಸ್ ಸ್ಪಷ್ಟನೆ
Tue, Jun 10 2025 09:16:21 AM
ಉಡುಪಿ, ಜೂ. 10 (DaijiworldNews/AA): "ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ನಾನು ಯಾವುದೇ ಪ್ರಕರಣ ದಾಖಲಿಸಿಲ್ಲ, ನನ್ನ ಹೆಸರಿನಲ್ಲಿ ಎಫ್ಐಆರ್ ದಾಖಲಾಗಿರುವುದು ನನಗೆ ತಿಳಿದಿರಲಿಲ್ಲ," ಎಂದು ಬೆಂಗಳೂರಿನ ಕಾಲ್ತುಳಿತ ಪ್ರಕರಣದ ಎಫ್ಐಆರ್ನಲ್ಲಿ ದೂರುದಾರನಾಗಿ ಹೆಸರಿಸಲ್ಪಟ್ಟಿರುವ ರೋಲನ್ ಗೊಮ್ಸ್ ಸ್ಪಷ್ಟನೆ ನೀಡಿದ್ದಾರೆ.
ಜೂನ್ 7 ರಂದು ದಾಯ್ಜಿವರ್ಲ್ಡ್ ವಾಹಿನಿಯ ಜೊತೆ ಮಾತನಾಡಿದ ಉಡುಪಿಯ ಶಿರ್ವ ಮೂಲದ ರೋಲನ್ ಗೊಮ್ಸ್ ಅವರು, "ಕಾಲ್ತುಳಿತದಲ್ಲಿ ಗಾಯಗೊಂಡ ನಂತರ, ನನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ಆಸ್ಪತ್ರೆಗೆ ಬಂದು ನನ್ನ ಹೇಳಿಕೆಯನ್ನು ಪ್ರತ್ಯಕ್ಷದರ್ಶಿಯಾಗಿ ದಾಖಲಿಸಿಕೊಂಡರು. ನನ್ನ ಹೆಸರು ಮತ್ತು ಹೇಳಿಕೆಯನ್ನು ಬಳಸಿ ಎಫ್ಐಆರ್ ದಾಖಲಿಸಲಾಗುವುದು ಎಂದು ನನಗೆ ತಿಳಿಸಿರಲಿಲ್ಲ. ನನ್ನ ವೈಯಕ್ತಿಕ ವಿವರಗಳು ಮತ್ತು ಫೋನ್ ಸಂಖ್ಯೆಯನ್ನು ನನ್ನ ಅನುಮತಿಯಿಲ್ಲದೆ ಸಾರ್ವಜನಿಕಗೊಳಿಸಲಾಗಿದೆ" ಎಂದು ಹೇಳಿದರು.
ಕಳೆದ 3-4 ವರ್ಷಗಳಿಂದ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರೋಲನ್ ಗೊಮ್ಸ್, 2011ರ ಭಾರತದ ವಿಶ್ವಕಪ್ ವಿಜಯದ ನಂತರ ಕ್ರಿಕೆಟ್ನ ಕಟ್ಟಾ ಅಭಿಮಾನಿಯಾಗಿದ್ದಾರೆ. ಆರ್ಸಿಬಿ ಐಪಿಎಲ್ ಗೆದ್ದ ರಾತ್ರಿ ಬೆಂಗಳೂರಿನ ವಾತಾವರಣವು ಸಂಭ್ರಮ ಮತ್ತು ಹಬ್ಬದಂತಿತ್ತು ಎಂದು ಅವರು ವಿವರಿಸಿದರು.
ಆರ್ಸಿಬಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವದ ಮೆರವಣಿಗೆ ಮತ್ತು ಸಂಭ್ರಮಾಚರಣೆ ಬಗ್ಗೆ ತಿಳಿದುಕೊಂಡ ರೋಲನ್ ಮತ್ತು ಅವರ ಮೂವರು ಸ್ನೇಹಿತರು ಈ ಕಾರ್ಯಕ್ರಮಕ್ಕೆ ತೆರಳಲು ನಿರ್ಧರಿಸಿದರು. "ಆರಂಭದಲ್ಲಿ, ತೆರೆದ ಬಸ್ ಮೆರವಣಿಗೆಯ ನಂತರ ಸಂಜೆ 5 ಗಂಟೆಗೆ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಇರುವುದಾಗಿ ಘೋಷಿಸಲಾಗಿತ್ತು. ನಾವು ಮಧ್ಯಾಹ್ನ 2 ಗಂಟೆಗೆ ಸ್ಥಳಕ್ಕೆ ತಲುಪಿದೆವು. ಆದರೆ ಟಿಕೆಟ್ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಇರಲಿಲ್ಲ. ಗೇಟ್ಗಳನ್ನು ಮುಚ್ಚಲಾಗಿತ್ತು ಮತ್ತು ಜನರಿಗೆ ನಿರ್ದೇಶನ ನೀಡಲು ಅಥವಾ ಜನರನ್ನು ನಿರ್ವಹಿಸಲು ಯಾವುದೇ ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿ ಇರಲಿಲ್ಲ" ಎಂದು ತಿಳಿಸಿದರು.
"ನಾವು ಗೇಟ್ ನಂಬರ್ 17ರ ಬಳಿ ಕಾಯುತ್ತಿದ್ದೆವು. 3:30 ಕ್ಕೆ, ಆರ್ಸಿಬಿ ವೆಬ್ಸೈಟ್ನಲ್ಲಿ ಉಚಿತವಾಗಿ ಪ್ರವೇಶ ಪಾಸ್ಗಳು ಲಭ್ಯವಿರುತ್ತವೆ ಎಂದು ಘೋಷಿಸಲಾಯಿತು. ಆದರೆ, ಕಳಪೆ ನೆಟ್ವರ್ಕ್ ನಿಂದಾಗಿ ಹೆಚ್ಚಿನ ಜನರಿಗೆ ಪಾಸ್ಗಳಿಲ್ಲದೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಜನಸಂದಣಿ ಹೆಚ್ಚಾದಂತೆ, ಭಯ ಪ್ರಾರಂಭವಾಯಿತು. ಸುಮಾರು 3:50 ಕ್ಕೆ, ಟಿಕೆಟ್ ಇಲ್ಲದೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಹಾಗಾಗಿ ಜನರನ್ನು ವ್ಯವಸ್ಥಿತವಾಗಿ ಹೋಗುವಂತೆ ಕೇಳಿಕೊಳ್ಳಲಾಯಿತು ಎಂದು ಮತ್ತೊಂದು ಘೋಷಣೆ ಮಾಡಲಾಯಿತು. ಆದರೆ ಆಗಾಗಲೇ ತಡವಾಗಿತ್ತು. ಜನಸಂದಣಿ ಒಂದೇ ಬಾರಿಗೆ ನುಗ್ಗಿತು ಮತ್ತು ಪರಿಸ್ಥಿತಿಯನ್ನು ನಿರ್ವಹಿಸಲು ಯಾವುದೇ ಅಧಿಕೃತ ಭದ್ರತಾ ಸಿಬ್ಬಂದಿ ಇರಲಿಲ್ಲ" ಎಂದು ಮಾಹಿತಿ ನೀಡಿದರು.
ಅಪಾಯವನ್ನು ಅರಿತ ರೋಲನ್ ಮತ್ತು ಅವರ ಸ್ನೇಹಿತರು ಸ್ಥಳದಿಂದ ಹೊರಡಲು ಪ್ರಯತ್ನಿಸಿದರು. ಆದರೆ ಅತಿಯಾದ ಜನಸಂದಣಿಯಿಂದಾಗಿ ವಾಪಾಸ್ಸಾಗಲು ಸಾಧ್ಯವಾಗಲಿಲ್ಲ. ಜನರ ನೂಕುನುಗ್ಗಲಲ್ಲಿ ಒಂದು ಬ್ಯಾರಿಕೇಡ್ ಕುಸಿಯಿತು. "ನನ್ನ ಸ್ನೇಹಿತರಲ್ಲಿ ಒಬ್ಬರು ಬಿದ್ದರು. ಅವರಿಗೆ ನಾನು ಸಹಾಯ ಮಾಡುವ ವೇಳೆಯಲ್ಲಿ ನನ್ನ ಕಾಲು ಬ್ಯಾರಿಕೇಡ್ನಲ್ಲಿ ಸಿಕ್ಕಿಹಾಕಿಕೊಂಡಿತು. ಜನರು ಒಬ್ಬರ ಮೇಲೆ ಒಬ್ಬರು ಬೀಳಲು ಪ್ರಾರಂಭಿಸಿದರು. ನಾನು ಮೇಲೆ ಎದ್ದೇಳಲು ಬಹಳ ಪ್ರಯತ್ನಿಸಿದೆ. ಆ ಸಂದರ್ಭದಲ್ಲಿ ಯಾರೋ ನನ್ನ ಹೊಟ್ಟೆಯ ಮೇಲೆ ಬಿದ್ದರು. ಇದರಿಂದಾಗಿ ನಾನು ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡೆ" ಎಂದರು.
"ಪೊಲೀಸ್ ಅಧಿಕಾರಿಗಳು ಸುಮಾರು 4:30 ಕ್ಕೆ ಪ್ರದೇಶವನ್ನು ತೆರವುಗೊಳಿಸಲು ಪ್ರಾರಂಭಿಸಿದರು. ಅವರು ನನ್ನ ಮುಖದ ಮೇಲೆ ನೀರು ಚಿಮುಕಿಸಿದರು, ನನಗೆ ಒಆರ್ಎಸ್ ನೀಡಿದರು ಮತ್ತು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು" ಎಂದು ಹೇಳಿದರು.
"ಸ್ಟೇಡಿಯಂನ ಸಾಮರ್ಥ್ಯ ಸುಮಾರು 30,000 ದಿಂದ 40,000. ಆದರೆ ಸುಮಾರು 2 ರಿಂದ 3 ಲಕ್ಷ ಜನರು ಕಾರ್ಯಕ್ರಮ ನೋಡಲು ಜಮಾಯಿಸಿದ್ದರು. ಜನರು ಅಕ್ಷರಸ್ಥರಾಗಿರಬಹುದು, ಆದರೆ ಜನರಲ್ಲಿ ವರ್ತನೆಯಲ್ಲಿ ಪ್ರಾಯೋಗಿಕ ಜ್ಞಾನ ಅಥವಾ ಮಾನವೀಯತೆ ಇಲ್ಲ. ಈ ಘಟನೆಯು ಸಾರ್ವಜನಿಕರು, ಸಂಘಟಕರು ಮತ್ತು ಕಾರ್ಯಕ್ರಮ ನಿರ್ವಹಣಾ ಸಂಸ್ಥೆಗಳ ಸಾಮೂಹಿಕ ವೈಫಲ್ಯವಾಗಿದೆ" ಎಂದು ತಿಳಿಸಿದರು.